ತುಮಕೂರು: ವಿಶ್ವ ಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿರುವುದಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ. ವೈದ್ಯರ ಪ್ರಯತ್ನದ ನಡುವೆಯೂ ಅವರು ನಮ್ಮನ್ನು ಅಗಲಿರುವುದು ದು:ಖದ ಸಂಗತಿ ಎಂದು ಕಂಬನಿ ಮಿಡಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಸಾಮಾಜಿಕ-ಧಾರ್ಮಿಕ ಕಾರ್ಯವನ್ನು ಮೆಲುಕು ಹಾಕಿದ ಶ್ರೀಗಳು, ರಾಮ ಜನ್ಮ ಭೂಮಿ ವಿಚಾರದಲ್ಲಿ ವಿಶ್ವೇಶ ತೀರ್ಥರು ಮುಂಚೂಣಿಯಲ್ಲಿದ್ದರು. ಅವರು ಬದುಕಿದ್ದಾಗಲೇ ರಾಮಮಂದಿರ ಕಾನೂನು ಸಮರ ತೀರ್ಮಾನವಾಗಿದ್ದು ಸಂತಸ ತಂದಿದೆ. ಆದರೂ ರಾಮ ಮಂದಿರ ಶಂಕುಸ್ಥಾಪನೆ ಪೇಜಾವರ ಶ್ರೀಗಳಿಂದಲೇ ನೆರವೇರಬೇಕು ಎಂಬುದು ಬಹುಜನರ ಅಪೇಕ್ಷೆಯಾಗಿತ್ತು. ಆದರೆ ಪ್ರಕೃತಿ ನಿಯಮದಂತೆ ಅವರು ನಮ್ಮನ್ನು ಅಗಲಿದ್ದು ದುಃಖದ ವಿಚಾರ ಎಂದರು.
ಪೇಜಾವರ ಶ್ರೀಗಳು ನಾಡು, ರಾಷ್ಟ್ರಕ್ಕೆ ಅದ್ಭುತವಾದ ಸೇವೆ ಸಲ್ಲಿಸಿದ್ದಾರೆ. ಸಂಘಟನೆ ಮತ್ತು ಸಂಸ್ಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೊಡ್ಡ ಸಂತರಾಗಿ, ಆಧ್ಯಾತ್ಮದ ಸಾಧನೆ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿ, ಸೇವಾ ಕೈಂಕರ್ಯ ನಮಗೆ ಆದರ್ಶವಾಗಿದೆ. ಮಠದ ಕಿರಿಯ ಶ್ರೀಗಳಿಗೆ ಪೇಜಾವರ ಸ್ವಾಮೀಜಿ ಅಗಲಿಕೆ ದು:ಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಸಿದ್ದಗಂಗಾ ಮಠದ ಬಗ್ಗೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಬಗ್ಗೆ ಪೇಜಾವರ ಶ್ರೀಗಳು ಅಪಾರ ಕಳಕಳಿ ಭಕ್ತಿ ಹೊಂದಿದ್ದರು. ಶಿವಕುಮಾರ ಸ್ವಾಮೀಜಿಗೆ ವಿಶ್ವೇಶ ತೀರ್ಥರು ಮಹಾಸ್ವಾಮಿಗಳು ಎಂದು ಹೇಳುತ್ತಿದ್ದರು ಎಂದು ಶಿವಕುಮಾರ ಶ್ರೀಗಳೊಂದಿಗಿನ ಪೇಜಾವರ ಶ್ರೀಗಳ ಒಡನಾಟವನ್ನು ನೆನಪಿಸಿಕೊಂಡರು.