ತುಮಕೂರು: ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಶ್ರೀಗಳು ಬುಧವಾರ ಬೆಳಗಿನ ಜಾವ ಮಠಕ್ಕೆ ವಾಪಾಸಾಗಿದ್ದರು. ಬುಧವಾರ ಮಠದ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ತಮ್ಮ ದರ್ಶನ ಪಡೆಯುವ ಭಾಗ್ಯವನ್ನು ಕಲ್ಪಿಸಿಕೊಟ್ಟಿದ್ದರು.
ಬಹುದಿನಗಳ ಬಳಿಕ ಮಠಕ್ಕೆ ಮರಳಿರುವ ನಡೆದಾಡುವ ದೇವರ ಆಶೀರ್ವಾದವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದು, ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳಿಗೆ ರಾತ್ರಿ 10 ಗಂಟೆಯಿಂದಲೇ ಕಿರಿಯ ಶ್ರೀಗಳು ಅನುವು ಮಾಡಿಕೊಟ್ಟಿದ್ದರು.
ಸಿದ್ದಗಂಗಾ ಶ್ರೀಗಳ ಆರೋಗ್ಯ ಹಿನ್ನೆಲೆ ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಶ್ರೀಗಳು ದರ್ಶನ ನೀಡಿದ್ದಾರೆ. ಈ ವೇಳೆ ಸಾರ್ವಜನಿಕರು ಸಹ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಯ ದರ್ಶನವನ್ನು ಪಡೆದಿದ್ದಾರೆ. ಹಳೆಯ ಮಠದ ಕೊಠಡಿಯೊಂದರಲ್ಲಿ ಶ್ರೀಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಡಾ. ರೇಲಾ ಹಾಗೂ ಸಿದ್ದಗಂಗಾ ಆಸ್ಪತ್ರೆಯ ವೈದ್ಯರ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಂದು ಸಾಹ ಸುಮಾರು 5:30 ಗಂಟೆಯಿಂದಲೇ ವಿದ್ಯಾರ್ಥಿಗಳು ಮತ್ತೆ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.
ತುಂಬಾ ದಿನಗಳ ಬಳಿಕ ಮಠಕ್ಕೆ ಮರಳಿರುವ ಸಿದ್ದಗಂಗಾ ಶ್ರೀಗಳನ್ನು ನೋಡಲು ಭಕ್ತ ಸಾಗರವೇ ಸಿದ್ದಗಂಗಾ ಮಠದತ್ತ ಹರಿದು ಬಂದಿದೆ. ಅಲ್ಲದೆ ಶ್ರೀಗಳ ಆರೋಗ್ಯವನ್ನು ವಿಚಾರಿಸಲು ರಾಜಕೀಯ ನಾಯಕರು ಕೂಡ ಮಠಕ್ಕೆ ಆಗಮಿಸಿದ್ದು, ಶ್ರೀಗಳ ಆರ್ಶಿವಾದ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv