ಸಿಡ್ನಿ: ಆಟವಾಡುವ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಟೀಂ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಬಿಸಿಸಿಐ (BCCI) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಭಾರತಕ್ಕೆ ವಾಪಸ್ ಯಾವಾಗ?: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಶ್ರೇಯಸ್ ಅಯ್ಯರ್ ಇನ್ನೂ ಕೆಲವು ದಿನ ವೈದ್ಯಕೀಯ ಸಮಾಲೋಚನೆಗಳಿಗಾಗಿ ಸಿಡ್ನಿಯಲ್ಲಿಯೇ ಇರುತ್ತಾರೆ. ವಿಮಾನದಲ್ಲಿ ಹಾರಾಟಕ್ಕೆ ಫಿಟ್ ಎಂದು ವೈದ್ಯರು ವರದಿ ನೀಡಿದ ಬಳಿಕವಷ್ಟೇ ಅವರು ಭಾರತಕ್ಕೆ ವಾಪಸ್ ಬರಲಿದ್ದಾರೆ ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ಇದನ್ನೂ ಓದಿ: Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್ ಅಯ್ಯರ್ಗೆ ಚಿಕಿತ್ಸೆ
ಶ್ರೇಯಸ್ ಅಯ್ಯರ್ಗೆ ಏನಾಗಿತ್ತು..?: ಕಳೆದ ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಾ ಕ್ಯಾಚ್ ಪಡೆಯಲು ಯತ್ನಿಸಿದಾಗ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆಂತರಿಕ ರಕ್ತಸ್ರಾವವಾಯಿತು. ಗಾಯವನ್ನು ತಕ್ಷಣವೇ ಗುರುತಿಸಿ, ಸಣ್ಣ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವನ್ನು ನಿಲ್ಲಿಸಲಾಯಿತು.
ಅಯ್ಯರ್ ಆರೋಗ್ಯ ಈಗ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ, ಸಿಡ್ನಿ ಮತ್ತು ಭಾರತದ ತಜ್ಞರು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೇಯಸ್ಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿದ್ದಕ್ಕಾಗಿ ಸಿಡ್ನಿಯಲ್ಲಿರುವ ಡಾ. ಕೌರೌಶ್ ಹಘಿಗಿ ಮತ್ತು ತಂಡ ಹಾಗೂ ಭಾರತದ ಡಾ. ದಿನ್ಶಾ ಪರ್ದಿವಾಲಾ ಅವರಿಗೆ ಬಿಸಿಸಿಐ ಕೃತಜ್ಞತೆ ಸಲ್ಲಿಸಿದೆ.


