ನವದೆಹಲಿ: ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಫ್ತಾಬ್ನನ್ನು (Aftab) ಮಂಪರು ಪರೀಕ್ಷೆಗೆ ಒಳಪಡಿಸಲು ದೆಹಲಿಯ ಸಾಕೇತ್ ಕೋರ್ಟ್ ಅನುಮತಿ ನೀಡಿದೆ. ಪರೀಕ್ಷೆಗೆ ಅನುಮತಿ ಕೋರಿ ದೆಹಲಿ ಪೊಲೀಸರು (Delhi Police) ಕೋರ್ಟ್ಗೆ ಮನವಿ ಮಾಡಿದ್ದರು.
ಪ್ರಕರಣದಲ್ಲಿ ಅಫ್ತಾಬ್ ಕೆಲವು ಸಂಗತಿಗಳನ್ನು ಮುಚ್ಚಿಡುತ್ತಿರುವ ಅನುಮಾನಗಳು ಪೊಲೀಸರಿಗೆ ವ್ಯಕ್ತವಾಗಿದೆ. ಪದೇ ಪದೇ ಅಫ್ತಾಬ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಈ ಹಿನ್ನೆಲೆ ನಿಖರ ಮಾಹಿತಿ ಪಡೆಯುವ ಉದ್ದೇಶದಿಂದ ಮಂಪರು ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಸಾಧ್ಯತೆ
ಅಫ್ತಾಬ್ ಮಾನಸಿಕ ಸ್ಥಿತಿ, ಶ್ರದ್ಧಾ ಜೊತೆಗಿನ ಸಂಬಂಧ, ಹತ್ಯೆಯ ಹಿಂದಿನ ನಿರ್ದಿಷ್ಟ ಉದ್ದೇಶ ಎಲ್ಲವನ್ನು ಖಚಿತಪಡಿಸಿಕೊಳ್ಳುವುದು ಮಂಪರು ಪರೀಕ್ಷೆಯ ಮತ್ತೊಂದು ಉದ್ದೇಶವಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ. ಈ ಪರೀಕ್ಷೆಯು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲದಿದ್ದರೂ ಸಾಕ್ಷಿಗಳನ್ನು ಬೆಂಬಲಿಸುವ ದೃಷ್ಟಿಯಿಂದ ಪರೀಕ್ಷೆ ಅಗತ್ಯ ಎನ್ನಲಾಗುತ್ತಿದೆ.
ಮಂಪರು ಪರೀಕ್ಷೆಯಲ್ಲಿ ಅಪರಾಧಿಗೆ ತಜ್ಞರು ಸೋಡಿಯಂ ಪೆಂಟೋಥಾಲ್ ಅಥವಾ ಸೋಡಿಯಂ ಅಮಿಟಾಲ್ನೊಂದಿಗೆ ಇಂಜೆಕ್ಷನ್ ನೀಡಲಾಗುತ್ತೆ. ಇಂಜೆಕ್ಷನ್ ಬಳಿಕ ಅರೆ ಪ್ರಜ್ಞಾಸ್ಥಿತಿಗೆ ತೆರಳಲಿದ್ದು, ಬಳಿಕ ಅವರಿಂದ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತೆ. ಅರೆಪ್ರಜ್ಞೆ ಸ್ಥಿತಿಯಲ್ಲಿ ಅಪರಾಧಿ ಸುಳ್ಳು ಹೇಳಲು ಕಷ್ಟ ಆಗಬಹುದು. ಪೊಲೀಸರಿಗೆ ಕೋರ್ಟ್ನಿಂದ ಅನುಮತಿ ಸಿಕ್ಕಿದೆಯಾದರೂ, ನಿಯಮಗಳ ಪ್ರಕಾರ ಆರೋಪಿ ಅಫ್ತಾಬ್ ಅನುಮತಿಯನ್ನು ಪೊಲೀಸರು ಪಡೆಯಬೇಕಾಗಿದೆ. ಇದನ್ನೂ ಓದಿ: ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್