– ಬೆಂಗಳೂರಿನಿಂದ ದುಬೈಗೆ 4 ಗಂಟೆ ಪ್ರಯಾಣ
– ರನ್ಯಾಗೆ ದುಬೈನಲ್ಲಿ ರಕ್ತ ಸಂಬಂಧಿಕರು, ಹೂಡಿಕೆ ಇಲ್ಲ
– ಫೆಬ್ರವರಿಯಲ್ಲಿ 6 ಬಾರಿ ದುಬೈಗೆ ಹೋಗಿ ಬಂದಿದ್ದ ರನ್ಯಾ
ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಚಿನ್ನ ಸಾಗಾಟ ಪ್ರಕರಣದಲ್ಲಿ (Gold Smuggling Case) ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ರನ್ಯಾ ರಾವ್ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ(DRI) ಅಧಿಕಾರಿಗಳಿಗೆ ಅನುಮಾನ ಮೂಡಲು ಕಾರಣವಾಗಿದ್ದು ಆ 9 ಗಂಟೆ.
ಬೆಂಗಳೂರಿನಿಂದ (Bengaluru) ದುಬೈಗೆ 4 ಗಂಟೆ ವಿಮಾನ ಪ್ರಯಾಣವಿದೆ. ಆದರೆ ರನ್ಯಾ ರಾವ್ ಬೆಳಗ್ಗೆ 10 ಗಂಟೆಗೆ ದುಬೈ (Dubai) ವಿಮಾನ ಹತ್ತಿ ಸಂಜೆ 7 ಗಂಟೆಗೆ ಬೆಂಗಳೂರಿಗೆ ವಾಪಸ್ ಮರಳುತ್ತಿದ್ದಳು.
ಕಳೆದ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ ಆರು ಬಾರಿ ದುಬೈಗೆ ರನ್ಯಾ ರಾವ್ ಹೋಗಿ ಬಂದಿದ್ದಳು. ಬೆಂಗಳೂರಿನಿದ ದುಬೈಗೆ ಹೋಗಲು ಮತ್ತು ಬರಲು ಸರಿ ಸುಮಾರು 4 ಗಂಟೆ ಇದೆ. ಆದರೆ ಇವಳು ಕೇವಲ 9 ಗಂಟೆಯ ಒಳಗಡೆ ಹೋಗಿ ಬರುತ್ತಿದ್ದದ್ದು ಅನುಮಾನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್ಪಿನ್ ಬೇರೆ!
ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದಳು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗುತ್ತಿದ್ದ ರನ್ಯಾಳಿಗೆ ಯಾವುದೇ ಹೂಡಿಕೆ, ರಕ್ತ ಸಂಬಂಧಿಕರು ಇಲ್ಲ ಎಂಬ ವಿಚಾರ ತನಿಖೆಯಿಂದ ಡಿಆರ್ಐ ಗೊತ್ತಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಡಿಆರ್ಐ ಅಧಿಕಾರಿಗಳು ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಇದನ್ನೂ ಓದಿ: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು
ಈ ಬಂಧನಕ್ಕೂ 2 ವಾರಗಳ ಹಿಂದೆ ರನ್ಯಾ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನು ಡಿಜಿಪಿ ಮಗಳು ಎಂದು ತಪಾಸಣೆಗೆ ಒಳಗಾಗದೇ ಹೊರಗೆ ಬರುತ್ತಿದ್ದದ್ದಳು. ಪ್ರತಿ ಬಾರಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳದ ಬಳಿಕ ರನ್ಯಾಳ ಮೇಲೆ ಕಣ್ಣಿಟ್ಟಿದ್ದ ಡಿಆರ್ಐ ಅಧಿಕಾರಿಗಳು ಆಕೆಯ ವಿದೇಶ ಪ್ರಯಾಣದ ಹಿನ್ನೆಲೆಯನ್ನು ಕೆದಕುತ್ತಾ ಹೋದಾಗ ಒಂದೊಂದಾಗಿಯೇ ಎಲ್ಲವೂ ಬಯಲಾಗಿದೆ.
ರನ್ಯಾ ಮತ್ತೆ ದುಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಜಾಗೃತರಾದ ಅಧಿಕಾರಿಗಳು ರನ್ಯಾ ಬರುವಿಕೆಗಾಗಿಯೇ ಕಾಯುತ್ತಿದ್ದರು. ಮಾ. 3 ರಂದು ರನ್ಯಾ ಪತಿ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಣಕ್ಕೆ ಬಂದಿಳಿಯುತ್ತಿದ್ದಂತೆ ಡಿಆರ್ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಆಗಲೂ ಸಹ ರನ್ಯಾಳನ್ನು ತಪಾಸಣೆ ಇಲ್ಲದೇ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್ಸ್ಟೇಬಲ್ ಬಸವರಾಜ್ ತೆರಳಿದ್ದರು. ರನ್ಯಾಳನ್ನ ಅಧಿಕಾರಿಗಳು ವಶಕ್ಕೆ ಪಡೆದಾಗ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ.
ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ತಿಳಿದಿದೆ. ತೊಡೆಯ ಭಾಗಕ್ಕೆ 14 ಬಿಸ್ಕೆಟ್ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿದೆ.
ವಾಶ್ ರೂಮಿನಲ್ಲಿ ಚಿನ್ನ ಹಸ್ತಾಂತರ:
ತನಿಖೆ ಸಮಯದಲ್ಲಿ ದುಬೈ ವಿಮಾನ ನಿಲ್ದಾಣ ವಾಶ್ ರೂಮ್ನಲ್ಲಿ ರನ್ಯಾ ರಾವ್ಗೆ ಚಿನ್ನ ಹಸ್ತಾಂತರವಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣ ಪ್ರವೇಶ ಮತ್ತು ನಿರ್ಗಮನ ಎರಡು ಕಡೆಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಆದರೆ ರನ್ಯಾ ರಾವ್ ವಿಮಾನ ನಿಲ್ದಾಣದಿಂದಲೇ ನಿರ್ಗಮಿಸುತ್ತಿರಲಿಲ್ಲ. ರನ್ಯಾ ರಾವ್ ಹೊರಗಡೆಯಿಂದ ಖರೀದಿ ಮಾಡದೇ ವಿಮಾನ ನಿಲ್ದಾಣದ ವಾಶ್ರೂಮಿನಲ್ಲೇ ಚಿನ್ನ ಹಸ್ತಾಂತರವಾಗುತ್ತಿತ್ತು.
ವಾಶ್ ರೂಮ್ನಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಬಹುತೇಕ ಕಳ್ಳ ಸಾಗಾಣಿಕೆದಾರರು ಇಲ್ಲೇ ವಸ್ತುಗಳನ್ನು ಉಳಿದವರಿಗೆ ಹಸ್ತಾಂತರ ಮಾಡುತ್ತಾರೆ. ವಿಮಾನ ಲ್ಯಾಂಡ್ ಆದ ಬಳಿಕ ವಾಶ್ ರೂಮ್ಗೆ ತೆರಳುತ್ತಿದ್ದ ರನ್ಯಾಗೆ ಚಿನ್ನ ಹಸ್ತಾಂತರವಾಗುತ್ತಿತ್ತು. ಆ ಒಂದು ಗಂಟೆಯ ಬ್ರೇಕ್ ಅವಧಿಯಲ್ಲಿ ಚಿನ್ನವನ್ನು ತೊಡೆಯ ಭಾಗದಲ್ಲಿ ಇರಿಸಿ ಬೆಂಗಳೂರಿಗೆ ಬರುತ್ತಿದ್ದ ವಿಮಾನ ಹತ್ತುತ್ತಿದ್ದಳು.