ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತ ಉಂಟಾಗಿದ್ದು, ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಶಾಸಕ ಸೋವನ್ ಚಟರ್ಜಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು ದೆಹಲಿಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೋವನ್ ಚಟರ್ಜಿ ಅವರು ಕೋಲ್ಕತ್ತಾದ ಮಾಜಿ ಮೇಯರ್ ಸಹ ಆಗಿದ್ದು, ಈಗ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಸೋವನ್ ಚಟರ್ಜಿ ಆಪ್ತ ಬೈಸಾಕಿ ಬ್ಯಾನರ್ಜಿ ಸಹ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೋವನ್ ಇತ್ತೀಚೆಗೆ ಹೆಚ್ಚು ಬಾರಿ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲದೆ, ಬಿಜೆಪಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Delhi: TMC MLA Sovan Chatterjee joins Bharatiya Janata Party in presence of BJP leader Mukul Roy, at party headquarters. pic.twitter.com/LAoG2lLyif
— ANI (@ANI) August 14, 2019
ಸೋವನ್ ಚಟರ್ಜಿ ಅವರನ್ನು ಮನವೊಲಿಸಲು ಮಮತಾ ಬ್ಯಾನರ್ಜಿ ಅವರು ಹಲವು ಬಾರಿ ಪ್ರಯತ್ನಿಸಿದ್ದರು. ಹುದ್ದೆಯನ್ನು ನೀಡುವುದಾಗಿ ಸಹ ಭರವಸೆ ನೀಡಿದ್ದರು. ಅಲ್ಲದೆ, ಮಮತಾ ಬ್ಯಾನರ್ಜಿ ಅವರ ಆಪ್ತ ಹಾಗೂ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಸೋವನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿತ್ತು.
ಕಳೆದ ಹಲವು ತಿಂಗಳುಗಳಿಂದ ಸೋವನ್ ಟಿಎಂಸಿಯಿಂದ ಸಂಪೂರ್ಣವಾಗಿ ದೂರವಾಗುತ್ತಲೇ ಬಂದಿದ್ದರು. ಅಲ್ಲದೆ, ಕಳೆದ ವರ್ಷ ನವೆಂಬರ್ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋವನ್ ಅವರಿಗೆ ಕೋಲ್ಕತ್ತಾ ಮೇಯರ್ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ಆಗಿನಿಂದ ಮಮತಾ ಬ್ಯಾನರ್ಜಿ ಮತ್ತು ಸೋವನ್ ನಡುವಿನ ಬಿರುಕು, ಹಂತ ಹಂತವಾಗಿ ಹೆಚ್ಚಾಗಿತ್ತು. ಹೀಗಾಗಿ ಅಂತಿಮವಾಗಿ ಅವರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ಹಂತವನ್ನು ತಲುಪಿದೆ.
ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಸೋವನ್ ಅವರು ಬಹುದೊಡ್ಡ ಕೊಡುಗೆ ನೀಡಿದ್ದರು. ಇದೀಗ ಸೋವನ್ ಬಿಜೆಪಿ ಸೇರಿರುವುದು ಬಂಗಾಳದ ರಾಜಕೀಯದಲ್ಲಿ ಬಹುದೊಡ್ಡ ಬೆಳವಣಿಗೆಯಗಿದೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ತಿಳಿಸಿದ್ದಾರೆ.