– ಅತೃಪ್ತ ಶಾಸಕರು ಬಿಜೆಪಿಗೆ ಬಂದರೆ ಸ್ವಾಗತ
ನವದೆಹಲಿ: ಬಡವರ, ರೈತರ ಪರ ಹೋರಾಟ ನಡೆಸುತ್ತಾ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಿರುವುದು ಸಂತಸ ತಂದಿದೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವ ವಿಶ್ವಾಸ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಯಡಿಯೂರಪ್ಪ ಅವರು ಹೋರಾಟ ಹಿನ್ನೆಲೆಯಿಂದ ಬಂದಿರುವ ಕಾರಣ ಮುಂದಿನ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಈ ವೇಳೆ ಅವರು ಸಿಎಂ ಆಗುತ್ತಿರುವುದರಿಂದ ಅವರು ಖಂಡಿತ ಜನರ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಇದೇ ವೇಳೆ ಶಾಸಕರ ಅನರ್ಹತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅವರು ಕೆಲ ಶಾಸಕರ ಅನರ್ಹತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಹೈಕಮಾಂಡ್ ಕೂಡ ಸರ್ಕಾರ ರಚನೆಗೆ ತಡ ಮಾಡಿತ್ತು ಎನ್ನಬಹುದು. ಆದರೆ ಇಂದಿಗೂ ಕೆಲ ಶಾಸಕರ ರಾಜೀನಾಮೆ ಅಂಗೀಕಾರ ಮಾಡದ ಕಾರಣ ಗೊಂದಲ ಉಂಟಾಗಿದೆ ಎಂದರು.
Advertisement
ಮೈತ್ರಿ ಸರ್ಕಾರ ವಿರುದ್ಧ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದರು. ಅವರು ಮತ್ತೆ ಕಾಂಗ್ರೆಸ್, ಜೆಡಿಎಸ್ಗೆ ಮರಳುವುದಿಲ್ಲ ಎಂದಿದ್ದಾರೆ. ನಮ್ಮ 105 ಶಾಸಕರು ಬಿಎಸ್ವೈ ಅವರ ಪರವಾಗಿ ಇದ್ದೇವೆ. ಮುಂದೆ ಏನಾಗುತ್ತೆ ಕಾದು ನೋಡುತ್ತೇವೆ. ರಾಜೀನಾಮೆ ಸ್ವೀಕಾರವಾಗಿ ಶಾಸಕರು ಬಿಜೆಪಿಗೆ ಬರಲು ಇಚ್ಛೆ ಇದ್ದರೆ ಹೈಕಮಾಂಡ್ ಅವರಿಗೆ ಸ್ವಾಗತ ನೀಡಲಿದೆ. ಅವರನ್ನು ಮತ್ತೆ ಅದೇ ಕ್ಷೇತ್ರದಿಂದ ಗೆಲ್ಲಿಸಿಕೊಡುವ ಪ್ರಯತ್ನವನ್ನು ಬಿಜೆಪಿ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.
Advertisement
ಬಿಎಸ್ ಯಡಿಯೂರಪ್ಪ ಅವರು 24 ಗಂಟೆ ಕೆಲಸ ಮಾಡುವ ಸಾಮಥ್ರ್ಯವನ್ನ ಹೊಂದಿದ್ದಾರೆ. ಈ ಹಿಂದೆಯೂ ಕೂಡ ಅಧಿಕಾರಿಗಳು ಅವರು ಕೆಲಸ ರೀತಿ ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಕಳೆದ 1 ವರ್ಷದ ಮೈತ್ರಿ ಸರ್ಕಾರದ ಆಡಳಿತ, ವರ್ಗಾವಣೆ ದಂಧೆ, ಭ್ರಷ್ಟಾಚಾರದಿಂದ ಜನರು ಬೇಸರಗೊಂಡಿದ್ದರು. ಮುಂದಿನ 4 ವರ್ಷಗಳ ಅವಧಿಯಲ್ಲಿ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಬೇಕಿದೆ. ಬಿಎಸ್ ಯಡಿಯೂರಪ್ಪ ಅವರು ಇದಕ್ಕೆ ಸಮರ್ಥರಿದ್ದಾರೆ. ಎಲ್ಲರ ಸಹಕಾರದಿಂದ ಸ್ಥಿರ ಸರಕಾರ ನಡೆಯಲಿದೆ ಎಂದರು.