ಉಡುಪಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ಇಳಿಕೆ ಮಾಡಿದ್ದು, ಅದು ಹಾಗೆಯೇ ಮುಂದುವರಿಯಲಿ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲಿಯಮ್ ಉತ್ಪನ್ನಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಪದಾರ್ಥವಲ್ಲ. ಬೆಲೆ ನಿಗದಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಕಡಿಮೆ ಮಾಡಿ ದೀಪಾವಳಿಯಲ್ಲಿ ಜನತೆಗೆ ಹೊಸ ಕೊಡುಗೆ ನೀಡಿದೆ. ದರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಅಪೇಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರಾದಾಗ ದರ ವ್ಯತ್ಯಾಸ ಆಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ರೀತಿಯಾಗುತ್ತಿದೆ. ಕೇವಲ ನಮ್ಮ ಸರ್ಕಾರ ಮಾತ್ರವಲ್ಲ, ಆಯಾ ಸರ್ಕಾರಗಳ ಅವಧಿಯಲ್ಲೂ ಹೀಗೆಯೇ ಆಗಿದೆ. ದರ ಕಡಿಮೆಯಾಗಿದ್ದು, ಅದು ಹಾಗೆಯೇ ಉಳಿಯಬೇಕು. ನಮ್ಮ ಗ್ರಾಹಕರಿಗೆ ಒಳ್ಳೆಯದಾಗಬೇಕು. ಪೆಟ್ರೋಲ್ ದರ ಆಧರಿಸಿ ಇತರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ದರ ಯಥಾಸ್ಥಿತಿ ಇದ್ದರೆ ಜನರಿಗೆ ಅನುಕೂಲವಾಗುತ್ತದೆ. ಪ್ರಧಾನಿಯವರು ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಚುನಾವಣೆ ಫಲಿತಾಂಶ ಕುರಿತು ಮಾತನಾಡಿ, ಚುನಾವಣೆಯ ಫಲಿತಾಂಶ ಈಗ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಎರಡು ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ. ಪ್ರಜಾತಂತ್ರದಲ್ಲಿ ಜನರ ತೀರ್ಪನ್ನು ನಾವು ಸ್ವಾಗತಿಸಬೇಕು. ಹೋಲಿಕೆ ಮಾಡಲು ಹೋದರೆ ಸಿಂದಗಿಯಲ್ಲಿ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಉಪಚುನಾವಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಂತರ ಸುಲಭದ ವಿಚಾರವಲ್ಲ. ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಇಟ್ಟುಕೊಂಡು ಗೆದ್ದಿದ್ದೇವೆ. ಫಲಿತಾಂಶ ನೋಡಿ ಒಬ್ಬ ವ್ಯಕ್ತಿ ಅಥವಾ ಸರ್ಕಾರದ ಬಗ್ಗೆ ನಿರ್ಧಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ.8 ರಿಂದ ಅಂಗನವಾಡಿ ಕೇಂದ್ರಗಳು ರೀ ಓಪನ್
ಭತ್ತ ಬೆಳೆಗಾರರಿಗೆ ಬೆಂಬಲ ಬೆಲೆ ವಿಚಾರ
ಕರಾವಳಿ ಜಿಲ್ಲೆಗಳ ರೈತ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ಭತ್ತಕ್ಕೆ ಕೇಂದ್ರ ಸರ್ಕಾರ 1,940 ರುಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ತಕ್ಷಣ ಖರೀದಿ ಕೇಂದ್ರ ಆರಂಭಿಸಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದೇವೆ. ಖರೀದಿ ಕೇಂದ್ರ ಆರಂಭಿಸಲು ಇದು ಸಕಾಲ. ತಕ್ಷಣವೇ ಕ್ಯಾಬಿನೆಟ್ನಲಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.