ಮೈಸೂರು: ಸಂಸದೆ ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ವರ್ತಿಸಲಿ. ನಾವು ಬಿಜಾಪುರದವರು ನಮ್ಮ ಬಾಯಲ್ಲಿ ಬೇರೆ ಪದಗಳು ಬರುತ್ತೆ. ಆದರೆ ಅವರು ಹೆಣ್ಣುಮಗಳು ಅಂತ ನಾನು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆಗೆ ಗೃಹಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೃಹ ಸಚಿವರಿಗೆ ಕಾನೂನಿನ ಜ್ಞಾನವೇ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಗೆ ತಿರುಗೇಟು ನೀಡಿದರು. ಬಳಿಕ ಜಿಂದಾಲ್ ಬಗ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಶೋಭಾ ಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಅಂತ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕಾರ, ಸಂಸ್ಕೃತಿ ಜನರಿಗೆ ಗೊತ್ತಿದೆ. ಅದೆ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯು ಜನರಿಗೆ ಗೊತ್ತಿದೆ. ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.
ಐಎಂಎ ವಂಚನೆ ಪ್ರಕರಣದ ಬಗ್ಗೆ ಮಾತನಾಡಿ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರು ಸಚಿವರಾಗಿದ್ದರು ಸರಿ, ಶಾಸಕರಾಗಿದ್ದರು ಸರಿ. ನಮ್ಮ ಇಲಾಖೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ. ಎಸ್.ಐ.ಟಿ. ಇದನ್ನ ಸಮರ್ಪಕವಾಗಿ ನಿಭಾಯಿಸಲಿದೆ. ಸಿಬಿಐಗೆ ಕೊಟ್ಟ ಕೇಸ್ಗಳು ಏನಾಗಿವೆ ಅಂತ ನಮಗೆ ಗೊತ್ತಿವೆ. ದಿಢೀರ್ ನೆ ಬಿಜೆಪಿಯವರಿಗೆ ಸಿಬಿಐ ಮೇಲೆ ನಂಬಿಕೆ ಶುರುವಾಗಿದೆ ಎಂದು ಕಿಡಿಕಾರಿದರು.
ಹಾಗೆಯೇ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಕೂಡಿಸೋದು ನಮ್ಮ ಗುರಿ. ವಂಚನೆಕಾರರ ಆಸ್ತಿ ಜಪ್ತಿ ಮಾಡೋದು. ಇಂತಹ ಬೇರೆ ಕಂಪನಿಗಳ ತಲೆ ಎತ್ತದಂತೆ ನೋಡಿಕೊಳ್ಳುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಲ್ಲದೆ ಚಾರ್ಜ್ ಶೀಟ್ ಆಗದೆ ಯಾರ ಹೆಸರನ್ನು ಪ್ರಕರಣಕ್ಕೆ ಜೊಡಿಸಿ ಹೇಳೋದು ಸರಿಯಲ್ಲ. ಈ ಪ್ರಕರಣ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.