ಬೆಂಗಳೂರು: ರಹೀಂ ಖಾನ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ದೂರವಾಣಿ ಕರೆ ಮಾಡಿದ್ದರು ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅವರು ಮೈತ್ರಿ ಸರ್ಕಾರ ವಿರುದ್ಧ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಹೀಂಖಾನ್ ಯಾರು ಎಂದು ಈಶ್ವರ್ ಖಂಡ್ರೆ ಹೇಳಬೇಕು. ಅವರಿಗೂ ಬಿಜೆಪಿಗೂ ಏನು ಸಂಬಂಧ ಹೇಳಿ. ನಮ್ಮ ಸ್ಪೀಕರ್ ಇದ್ದ ಸಂದರ್ಭದಲ್ಲಿ ಅವರತ್ತ ಪೇಪರ್ ಎಸೆದ ಸಂದರ್ಭದಲ್ಲಿ ಅವರನ್ನ ನಾನು ನೋಡಿದ್ದೆ ಅಷ್ಟೇ. ಮಾತನಾಡುವ ಮುನ್ನ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದರು.
ಸುಖಾ ಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೆಲಸವನ್ನು ಬಿಟ್ಟು ನಿಜವಾದ ಸಂಗತಿಗಳ ಬಗ್ಗೆ ಹೇಳಬೇಕು. ನಾನು ಅವರೊಂದಿಗೆ ಮಾತನಾಡಿದಲ್ಲಿ ಆ ಆಡಿಯೋ ಬಿಡುಗಡೆ ಮಾಡಿ. ಸರ್ಕಾರ ಉರುಳುತ್ತೆ ಎಂದು ತಿಳಿದ ಕೂಡಲೇ ಮೈತ್ರಿ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈಗ ಇಡಿ ಒಬ್ಬ ಖಾನ್ ನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಯಾವ ಖಾನ್ ಗಳು ಒಳಗೆ ಹೋಗುತ್ತಾರೆ, ಯಾವ ಅಧಿಕಾರಿಗಳು, ರಾಜಕಾರಣಿಗಳು ಯಾವ ಖಾನ್ಗಳ ಜೊತೆ ಸಂಬಂಧ ಇದೆ ಎಂಬುವುದು ಗೊತ್ತಾಗುತ್ತದೆ ಎಂದರು.
ಸದ್ಯ ನಿಮ್ಮದೇ ಸರ್ಕಾರ ಇರುವುದರಿಂದ ನಿಮ್ಮ ಬಳಿಯೇ ಗುಪ್ತಚರ ಇಲಾಖೆ ಇದೆ. ಇದನ್ನು ಬಳಸಿಕೊಂಡು ಒಮ್ಮೆ ಚೆಕ್ ಮಾಡಿಕೊಳ್ಳಿ. ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಈಶ್ವರ್ ಖಂಡ್ರೆ ಅವರ ನಡೆಯೇ ಮೈತ್ರಿ ಸರ್ಕಾರ ಉರುಳಲಿದೆ ಎಂಬುವುದಕ್ಕೆ ತಾಜಾ ಉದಾಹರಣೆ ಆಗಿದೆ ಎಂದರು. ಅಲ್ಲದೇ ವಿಧಾನಸಭಾ ಮಂಡಲದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸ್ಪೀಕರ್ ಅವರ ನೇತೃತ್ವದಲ್ಲಿ ಇದು ನಡೆಯುತ್ತಿದ್ದು, ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದರು.