ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದವರು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಹೇಳಿದ್ದಾರೆ.
ನಗರದ ಹೊರವಲಯದ ಹಾರೋಬಂಡೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕೊಂದಂತಹ ಕೋಮುವಾದಿ ಶಕ್ತಿಗಳು ಗಾಂಧೀಜಿಯವರ 150ನೇ ಜಯಂತಿ ಆಚರಿಸುತ್ತಿವೆ. ಮಹಾತ್ಮ ಗಾಂಧೀಜಿ ಬಗ್ಗೆ ಅವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೇವಲ ತೋರಿಕೆಗಾಗಿ ಗಾಂಧಿ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಗಾಂಧಿ ಕೊಂದ ಹಂತಕನಿಗೆ ವಿಗ್ರಹ ಸ್ಥಾಪಿಸಿ ದೇವಾಲಯ ಕಟ್ಟುವುದು ವಿಪರ್ಯಾಸದ ಸಂಗತಿ. ಬಿಜೆಪಿಯವರಿಂದ ದೇಶ ಪ್ರೇಮ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.
ದೇಶದಲ್ಲಿ ಗಾಂಧೀಜಿ ನೆನಪಿಸಿಕೊಳ್ಳದೆ ಏನೂ ಮಾಡಲಾಗುವುದಿಲ್ಲ. ಆದರೆ ಬ್ರಾಂಡಿಂಗ್ ಹಾಗೂ ಪ್ರಚಾರಕ್ಕಾಗಿ ಗಾಂಧಿ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿಯ ತತ್ವಾದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಈಗ ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ. ಗಾಂಧೀಜಿಯವರ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವವಾಗಿದೆ. ಅವರ ತತ್ವಗಳನ್ನು ಕೊಂದವರು ಬಿಜೆಪಿಯವರು ನಾವು ಈಗಲೂ ತತ್ವಪಾಲನೆ ಮಾಡುತ್ತಿದ್ದೇವೆ ಎಂದು ಗಾಂಧಿ ತತ್ವದೆಡೆಗೆ ನಮ್ಮ ನಡಿಗೆ ಎಂಬ ಬಿಜೆಪಿ ಪಾದಯಾತ್ರೆ ಕುರಿತು ಶಿವಶಂಕರರೆಡ್ಡಿ ಲೇವಡಿ ಮಾಡಿದರು.
ವಿಪಕ್ಷ ನಾಯಕರಾಗಲು ಸಿದ್ದರಾಮಯ್ಯನವರೇ ಸಮರ್ಥರು. ಈ ಕುರಿತು ಬಹಳಷ್ಟು ಶಾಸಕರು ವಿಧಾನ ಪರಿಷತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಚ್.ಕೆ.ಪಾಟೀಲ್ ಅವರಿಗೂ ಜವಾಬ್ದಾರಿಯುತ ಸ್ಥಾನಮಾನ ಕೊಡುತ್ತಾರೆ. ವಿಧಾನಸಭೆ ಹೊರಗೆ ಹಾಗೂ ಒಳಗೆ ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯ ಸಿದ್ದರಾಮಯ್ಯನವರಿಗಿದೆ. ಜನರಲ್ಲೂ ಸಹ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಸಿಎಂ ಆಗಿದ್ದಾಗ ಓಳ್ಳೆಯ ಕೆಲಸ ಮಾಡಿದ ಕಾರಣ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.
ಎಚ್.ಕೆ.ಪಾಟೀಲ್ ಸಮರ್ಥರಲ್ಲ ಎಂಬ ಅರ್ಥ ಬೇಡ. ಪರಮೇಶ್ವರ್ ರವರಿಗೂ ಸಾಮಥ್ರ್ಯ ಇಲ್ಲ ಅಂತ ಅಲ್ಲ. ಸಾಮೂಹಿಕ ನಾಯಕತ್ವದಡಿಯಲ್ಲಿ ಎಲ್ಲರ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಪಕ್ಷಕ್ಕೆ ಎಲ್ಲ ನಾಯಕರೂ ಮುಖ್ಯ ಎಂದು ಶಿವಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು.