ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ಮಂಡ್ಯದಲ್ಲಿ ನಿಖಿಲ್ ಸೋಲು ಅಘಾತ ತಂದಿದ್ದು, ಮತಯಂತ್ರದ ದೋಷವೇ ನಿಖಿಲ್ ಸೋಲಲು ಕಾರಣವಾಯ್ತ ಎಂಬ ಅನುಮಾನ ಇದೇ ಎಂದು ಮಾಜಿ ಸಂಸದ ಶಿವರಾಮೇಗೌಡ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ. ನನ್ನ ಅಭಿಪ್ರಾಯ ಬಿಜೆಪಿಯ ಭರ್ಜರಿ ಗೆಲುವಿಗೆ ಇವಿಎಂ ದೋಷವೇ ಕಾರಣ ಎಂಬ ಅನುಮಾನ ಇದೆ. ಏಕೆಂದರೆ ಮಂಡ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಾರು ಎಂಟು ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಕ್ಕೆ ಅನುಮೋದನೆ ನೀಡಿದ್ದಾರೆ. ಆದರೂ ಸುಮಲತಾ ಗೆಲ್ಲುತ್ತಾರೆ ಎಂದರೆ ಮತಯಂತ್ರದ ಮೇಲಿನ ಅನುಮಾನ ಬಲವಾಗಿದೆ ಎಂದರು.
ನನ್ನ ಅನುಮಾನದಂತೆ ನೂರಕ್ಕೆ ನೂರು ಇವಿಎಂ ಮಿಷನ್ನಲ್ಲಿ ಮೋಸವಾಗಿದೆ. ಬಹಳ ಜನ ಇವಿಎಂ ಮಿಷನ್ನಲ್ಲಿ ಏನೋ ಪ್ಲಾನ್ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ಪ್ಲಾನ್ ಮಾಡಿರುವುದರ ಪ್ರಕಾರವೇ ಫಲಿತಾಂಶ ಬಂದಿದೆ. ದೇಶದಲ್ಲೂ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಇದು ಇವಿಎಂ ಮೇಲೆ ಅನುಮಾನ ಹುಟ್ಟಿಸುವ ವಿಚಾರವಾಗಿದೆ ಎಂದರು.
ಪುಲ್ವಾಮ ದಾಳಿಗೆ ಮುಂಚೆ ನರೇಂದ್ರ ಮೋದಿಯ ಗುಂಪಿಗೆ ಮತ್ತೆ ಅಧಿಕಾರ ಹಿಡಿಯುವ ನಂಬಿಕೆ ಇರಲಿಲ್ಲ. ಪುಲ್ವಾಮ ದಾಳಿ ಆದ ಮೇಲೆ ದೇಶದ ಜನರಿಗೆ ಭಾವನಾತ್ಮಕ ವಿಚಾರ ತಲೆಗೆ ತುಂಬಿ ಗೆದ್ದಿದ್ದಾರೆ. ಯುದ್ಧ ಆಗಬಹುದು ಎಂಬ ಭೀತಿಯಿಂದ ಜನ ಒಗ್ಗಟ್ಟಾಗಿ ವೋಟ್ ಹಾಕಿದ್ದಾರೆ ಎಂದು ಇದನ್ನು ಅರ್ಥೈಸಬಹುದು ಎಂದರು.