– ಚುನಾವಣೆ ಬಳಿಕ ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ಮುಚ್ಚಿ ಹೋಗುತ್ತೆ
ತುಮಕೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ ‘ಮಾಯಾಂಗನೆ’ ಎಂಬ ಪದ ಬಳಕೆ ಮಾಡಿದ್ದ ಸಂಸದ ಶಿವರಾಮೇಗೌಡ ಅವರು ಎದುರಾಳಿಗಳ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದು, ಚುನಾವಣೆ ಬಳಿಕ ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ಮುಚ್ಚಿಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ.
ತುಮಕೂರು ಕ್ಷೇತ್ರದ ತುರುವೆಕೆರೆಯಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಾನು ಈ ತಾಲೂಕಿನ ಅಳಿಯ. ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ನನಗೆ ಯಾವುದೇ ಸ್ಥಾನಮಾನ ಸಿಗಲಿಲ್ಲ. ಹೀಗಾಗಿ ಪಕ್ಷ ತೊರೆದು ಜೆಡಿಎಸ್ಗೆ ಬಂದೆ. ಈಗ ದೇವೇಗೌಡರ ಪಾದದ ಧೂಳಿಗೆ ಹೋದ ಮೇಲೆ ಅಧಿಕಾರ ಸಿಕ್ಕಿ ಸಂಸದನಾಗಿದ್ದೇನೆ. 6 ತಿಂಗಳ ಕಾಲ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ ಎಂದರು.
ದೇವೇಗೌಡರು ಸಂಸತ್ತಿನಲ್ಲಿ ಇದೇ ಕೊನೆಯ ಭಾಷಣ ಎಂದು ಹೇಳಿದ್ದರು. ಆಗ ಪ್ರಧಾನಿ ಮೋದಿ, ಸೇರಿ ಹಲವರು ನೀವು ಸ್ಪರ್ಧೆ ಮಾಡಬೇಕು ಎಂದು ಹೇಳಿದರು. ನಾವು ಕೂಡ ಮಂಡ್ಯದಿಂದಲೇ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವು. ಆದರೆ ತುಮಕೂರು ಹಿಂದುಳಿದಿದೆ ಎಂದು ಈ ಕ್ಷೇತ್ರಕ್ಕೆ ದೇವೇಗೌಡ ಅವರು ಬಂದರು ಎಂದು ವಿವರಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ಬಿಜೆಪಿ ಪಕ್ಷಕ್ಕೂ ರೈತರಿಗೂ ಸಂಬಂಧವೇ ಇಲ್ಲ. ಅವರನ್ನ ತಿರಸ್ಕಾರ ಮಾಡಬೇಕು ಎಂದರು. ಸಿಎಂ ಕುಮಾರಸ್ವಾಮಿ ಅವರ ಗುಣಗಾನ ಮಾಡಿ, ರಾಜ್ಯದ 17 ಜನ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಧಮ್ಮಿಲ್ಲ. ಬಾಯಿ ಬಿಟ್ಟು ಮಾತನಾಡಿದರೆ ಎಲ್ಲಿ ಮೋದಿ ನೋಡುತ್ತಾರೆ ಎಂದು ಉಸಿರು ಬಿಗಿದಿಟ್ಟುಕೊಂಡು ಕುಳಿತಿರುತ್ತಾರೆ ಎಂದು ಬಿಜೆಪಿ ಸಂಸದರನ್ನ ಕುಟುಕಿದರು.
ಇತ್ತ ಸುಮಲತಾ ಅವರ ವಿರುದ್ಧ ಶಿವರಾಮೇಗೌಡ ಅವರು ಮಾಯಾಂಗನೆ ಎಂಬ ಪದ ಬಳಕೆ ಮಾಡಿದ ಸಂಬಂಧ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. ಕ್ಯಾಂಡಲ್ ಹಿಡಿದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಿವರಾಮೇಗೌಡರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.