ಕಾರವಾರ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಸ್ವರ್ಣವಲ್ಲಿ ಶ್ರೀಗಳನ್ನು ರಾತ್ರೋ ರಾತ್ರಿ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.
ಬ್ರಾಹ್ಮಣ ಜನಾಂಗದ ಪೀಠಾಧಿಪತಿಯಾದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಯಲ್ಲಾಪುರ ಕ್ಷೇತ್ರದಲ್ಲಿ ಬ್ರಾಹ್ಮಣ ಜನಾಂಗ ಹಾಗೂ ಹಿಂದುಳಿದ ಜನಾಂಗದ ಮೇಲೆ ತನ್ನದೇ ಆದ ಹಿಡಿತ ಹೊಂದಿದ್ದಾರೆ. ಅಲ್ಲದೆ ಹಸಿರು ಕ್ರಾಂತಿ ಮೂಲಕ ಈ ಭಾಗದಲ್ಲಿ ಹೆಚ್ಚು ಚಿರಪರಿಚಿತರು. ಅಷ್ಟೇ ಅಲ್ಲದೆ ಕೈಗಾ ವಿರೋಧಿ ಹೋರಾಟದ ಮೂಲಕ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.
ಆದರೆ ಶಿವರಾಮ್ ಹೆಬ್ಬಾರ್ ಮಧ್ಯರಾತ್ರಿ 12 ಗಂಟೆಗೆ ಸ್ವರ್ಣವಲ್ಲಿ ಮಠಕ್ಕೆ ಭೇಟಿ ಕೊಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಿವರಾಮ್ ಹೆಬ್ಬಾರ್ ಶ್ರೀಗಳನ್ನು ದಿಢೀರ್ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಸ್ವಾಮಿಗಳ ಭೇಟಿ ಮಹತ್ವವಾಗಿದ್ದು, ಈ ಹಿಂದೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಕಾರಣರಾಗಿದ್ದ ಶ್ರೀಗಳು ಹೆಬ್ಬಾರ್ ಪರ ನಿಲ್ಲುವರೇ ಎಂಬುದನ್ನು ಕಾದುನೋಡಬೇಕಿದೆ.
ಯಲ್ಲಾಪುರದ ಕ್ಷೇತ್ರದಲ್ಲಿ ಅಧಿಕ ಬ್ರಾಹ್ಮಣ ಮತ ಇರುವ ಹಿನ್ನೆಲೆಯಲ್ಲಿ ಜಾತಿ ಮತ ಬೇಟೆಗೆ ಹೆಬ್ಬಾರ್ ಶ್ರೀಗಳನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಮಾತುಕತೆ ಬಳಿಕ ಶ್ರೀಗಳಿಂದ ಹೆಬ್ಬಾರ್ ಮಂತ್ರಾಕ್ಷತೆಯನ್ನೂ ಪಡೆದಿದ್ದಾರೆ.