ಕಾರವಾರ: ಬಿಜೆಪಿಯವರು ಹಿಟ್ಲರ್ ಸಂಸ್ಕೃತಿಯವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಮ್ ಹೆಬ್ಬಾರ್ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಹುಮ್ಮಸ್ಸಿಗೆ ಡಿಕೆ ಶಿವಕುಮಾರ್ ಅಡ್ಡಿಯಾದ ಕಾರಣ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಏನೂ ಆಗಲ್ಲ. ಅವರು ವಿಧಾನಸಭೆಯಲ್ಲೂ ಇದನ್ನೇ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿಯವರು ಅಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಅವರಿಗೆ ಸಮಾಧಾನವಾದಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಲೇಹ್ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ
ಭಾರತ್ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ್ ಬಂದ್ ಕರ್ನಾಟಕದಲ್ಲಿ ಯಶಸ್ವಿಯಾಗಿಲ್ಲ. ಅನೇಕ ಸ್ವಯಂಘೋಷಿತ ನಾಯಕರು ಭಾರತ್ ಬಂದ್ಗೆ ಕರೆಕೊಟ್ಟು ಸಂಪೂರ್ಣ ವಿಫಲತೆ ಕಂಡಿದ್ದಾರೆ. ಭಾರತ್ ಬಂದ್ನಿಂದ ಯಾವ ಸಾಧನೆಯೂ ಆಗಿಲ್ಲ. ಕಳೆದ ಒಂದು ವರ್ಷದಿಂದ ಭಾರತ ಬಂದಾಗಿಯೇ ಇದೆ. ಮತ್ತೆ ಭಾರತ್ ಬಂದ್ ಮಾಡುವುದರಿಂದ ಶಿಕ್ಷಣ, ವ್ಯಾಪಾರ – ಉದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ರಾಜ್ಯದ ಹಾಗೂ ದೇಶದ ಜನ ಈ ಭಾರತ್ ಬಂದ್ ಅನ್ನು ಒಪ್ಪಿಕೊಂಡಿಲ್ಲ. ಪ್ರಬಲವಾಗಿ ವಿರೋಧಿಸಿದ್ದಾರೆ ಎಂದು ನುಡಿದಿದ್ದಾರೆ.
ಕೆಲವರು ನೈತಿಕವಾಗಿ ಬೆಂಬಲವನ್ನಷ್ಟೇ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಭಾರತ್ ಬಂದ್ ಮಾಡಿದ್ದಾರೋ ಈ ಬಗ್ಗೆ ಸರ್ಕಾರ ವಿಧಾನಸಭೆಯ ಒಳಗೆ ಹಾಗೂ ಹೊರಗೆ ತನ್ನ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ನಿಶ್ಚಿತ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ