ಬೆಂಗಳೂರು: ಅಪ್ಪು ಹೊಗಳಿಸಿಕೊಳ್ಳುವ ಪದಾರ್ಥ. ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ ಎನಿಸುತ್ತಿದೆ ಎಂದು ಸಹೋದರನನ್ನು ನೆನೆದು ನಟ ಶಿವರಾಜ್ಕುಮಾರ್ ಕಣ್ಣೀರು ಹಾಕಿದರು.
ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪು ಬಗ್ಗೆ ಜಾಸ್ತಿ ಮಾತನಾಡಿ ನನ್ನ ಕಣ್ಣೆಸರೆ ಅವನಿಗೆ ಆಗಿ ಹೋಯ್ತೇನೊ ಎಂದೆನಿಸುತ್ತೆ. ನನ್ನ ತಮ್ಮನಿಗೆ ನನ್ನ ದೃಷ್ಟಿನೇ ತಾಗಿತೇನೊ ಎನಿಸುತ್ತೆ. ಯಾವುದೇ ಸಮಾರಂಭ, ಸಂದರ್ಶನದಲ್ಲೂ ಅಷ್ಟೊಂದು ಯಾಕೆ ಹೊಗಳುತ್ತೀಯಾ ನಿನ್ನ ತಮ್ಮನನ್ನು ಅಂತ ಎಲ್ಲರೂ ನನ್ನ ಕೇಳುತ್ತಿದ್ದರು ಎಂದು ನೆನೆದರು. ಇದನ್ನೂ ಓದಿ: ಪುನೀತ್ ಅಭಿಮಾನಿಗಳಿಗೆ ಅಶ್ವಿನಿ ಭಾವನಾತ್ಮಕ ಪತ್ರ
ಅವನು ಹೊಗಳಿಸಿಕೊಳ್ಳುವ ಪದಾರ್ಥ. ಅವನೇ ನನಗೆ ಪ್ರೇರಣೆ ಅಂತ ನಾನು ಎಷ್ಟೋ ಕಡೆ ಹೇಳಿಕೊಂಡಿದ್ದೇನೆ. ನಟಿಸಲು ನನಗೆ ಆಸಕ್ತಿಯೇ ಇರಲಿಲ್ಲ. ಆದರೆ ಶಿವಣ್ಣನೇ ಸ್ಫೂರ್ತಿ ಅಂತ ಎಷ್ಟೋ ಕಡೆ ಅಪ್ಪು ಹೇಳಿಕೊಂಡಿದ್ದಾನೆ. ಅದು ಅವನ ದೊಡ್ಡ ಗುಣ. ಯಾಕೆಂದರೆ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಅವನು ಮಾಡಿಬಿಟ್ಟಿದ್ದಾನೆ ಎಂದರು.
ಅವನ ಇನ್ನೊಂದು ರೂಪ ಕೂಡ ಅನಾವರಣವಾಗಿದೆ. ಎಲ್ಲಿಂದ ಬಂತು ಅವನಿಗೆ ಇಷ್ಟೊಂದು ಸಮಾಜ ಸೇವೆ ಮಾಡುವ ಗುಣ ಎಂದು ನಮಗೆ ಗೊತ್ತಿರಲಿಲ್ಲ ಎಂದು ಭಾವುಕರಾದರು. ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ
ಅಪ್ಪು ರಾಯಲ್ ಆಗಿ ಹುಟ್ಟಿ ಬೆಳೆದ. ರಾಯಲ್ ಆಗಿಯೇ ಇರುತ್ತಾನೆ ಎಂದು ಹೇಳುತ್ತಿದ್ದೆ. ಆದರೆ ದೇವರು ಅದಕ್ಕೆ ಅವಕಾಶ ಕೊಡಲಿಲ್ಲ. ಒಳ್ಳೆಯವರನ್ನು ಇರಲು ದೇವರು ಬಿಡುವುದಿಲ್ಲ. ಅದಕ್ಕೆ ಆದಷ್ಟು ಬೇಗ ತನ್ನತ್ತ ಕರೆದುಕೊಂಡಿದ್ದಾನೆ. ಅಪ್ಪು ಈಗಲೂ ನಮ್ಮೊಟ್ಟಿಗಿದ್ದಾನೆ. ಅವನನ್ನು ಜೀವಂತವಾಗಿರಿಸಲು ನಾವು ಪ್ರಯತ್ನಿಸಬೇಕು. ಅವನನ್ನು ಎಲ್ಲಿಯೂ ಕಳುಹಿಸಬಾರದು. ಅಪ್ಪ-ಅಮ್ಮನಿಗೆ ದೀಪ ಹಚ್ಚುವ ಕೆಲಸ ಮಾಡಲಿಲ್ಲ. ನನಗೆ ಆ ಬಗ್ಗೆ ನಂಬಿಕೆ ಇಲ್ಲ. ಅಪ್ಪುಗೂ ಕೂಡ ದೀಪ ಹಚ್ಚಲ್ಲ. ಎಲ್ಲರಿಗೂ ಹೋಗುವ ಸಮಯ ಬರುತ್ತೆ. ಆದರೆ ಅಪ್ಪು ಇಷ್ಟು ಬೇಗ ಹೋದನಲ್ಲ ಎನ್ನುವುದೊಂದೇ ಸಂಕಟ, ನೋವು ಎಂದು ದುಃಖಿಸಿದರು.
ಅಪ್ಪುಗೆ “ಮೇ ಶಾಯರ್ ತೋ ನಹಿ” ಎಂಬ ಹಾಡು ತುಂಬಾ ಇಷ್ಟ ಎಂದು ನೆನಪಿಸಿಕೊಂಡ ಶಿವಣ್ಣ, ವೇದಿಕೆಯಲ್ಲಿ ಆ ಹಾಡನ್ನು ಹಾಡಿದರು.