ಶಿವಮೊಗ್ಗ: ಅರಣ್ಯ ಇಲಾಖೆ ಕಚೇರಿಯ ಬೀಗ ಒಡೆದು ಕಳ್ಳತನ ನಡೆದಿರುವ ಘಟನೆ ಜಿಲ್ಲೆಯ ಸಾಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದಿದೆ.
ಕಚೇರಿಯ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕೆ.ಜಿ. ಶ್ರೀಗಂಧ ನಾಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಕಚೇರಿಯ ಕಾವಲುಗಾರ ನಾಗರಾಜ್ ನಾಪತ್ತೆಯಾಗಿದ್ದ. ಹೀಗಾಗಿ ಪೊಲೀಸರು ಅರಣ್ಯ ಸಿಬ್ಬಂದಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಾವಲುಗಾರ ನಾಗರಾಜ್ ಶವ ಸಾಗರ ತಾಲೂಕಿನ ಐಗಿನ್ ಬೈಲ್ನ ನೆದರವಳ್ಳಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.
ಇದೀಗ ಈ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದ್ದು ಅರಣ್ಯ ಇಲಾಖೆಯಲ್ಲಿ ಶ್ರೀಗಂಧ ಕಳ್ಳತನ ನಡೆಸಿರುವ ಕಳ್ಳರು, ಶ್ರೀಗಂಧ ಕಳವು ಮಾಡಿ ಕಾವಲುಗಾರನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.