ಶಿವಮೊಗ್ಗ: ಬಸ್ ಓಡಿಸುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ, ಪ್ರಯಾಣಿಕರ ಜೀವ ಉಳಿಸಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.
ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಬಸ್ ಚಾಲಕನನ್ನು ಶಿಕಾರಿಪುರ ತಾಲೂಕಿನ ಬಗನಕಟ್ಟೆ ನಿವಾಸಿ ಕುಮಾರ್(32) ಎಂದು ಗುರುತಿಸಲಾಗಿದೆ. ಕುಮಾರ್ ಕುಮದ್ವತಿ ಟ್ರಾವೆಲ್ಸ್ ಗೆ ಸೇರಿದ್ದ ಬಸ್ ಚಾಲಕನಾಗಿದ್ದು, ಶಿಕಾರಿಪುರದಿಂದ ಹೊನ್ನಾಳಿಗೆ ಈ ಬಸ್ ಹೋಗುತ್ತಿತ್ತು. ಈ ವೇಳೆ ಬಸ್ ಚಾಲನೆ ಮಾಡುತ್ತಿದ್ದ ಸಮಯದಲ್ಲೇ ಚಾಲಕ ಕುಮಾರ್ ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ಈ ಸಮಯದಲ್ಲಿ ತನ್ನ ಪರಿಸ್ಥಿತಿ ಅರಿತ ಚಾಲಕ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಬಸ್ಸನ್ನು ನಿಲ್ಲಿಸಲು ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ದುರಾದೃಷ್ಟವಶಾತ್ ಚಾಲಕ ಸಾವನ್ನಪ್ಪಿದ್ದಾನೆ. ತಾನು ಸಾವಿನ ದವಡೆಯಲ್ಲಿದ್ದರೂ ಚಾಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ.