ಶಿವಮೊಗ್ಗ: ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ.
ಜೋಗಫಾಲ್ಸ್ ಎಸ್ಬಿಐ ಶಾಖೆಯ ಅನಿಲ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ಮ್ಯಾನೇಜರ್. ಮೃತ ಅನಿಲ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅನಿಲ್ ಕುಮಾರ್ ಕೆಲಸದ ಒತ್ತಡದಿಂದ ಮಾನಸಿಕವಾಗಿ ಕುಂದಿದ್ದರು. ಕಳೆದ ಎರಡು ದಿನಗಳಿಂದ ರಜೆಯಲ್ಲಿದ್ದ ಅವರು ಇಂದು ಬ್ಯಾಂಕ್ಗೆ ಹೋಗಿ ಬಾಗಿಲು ತೆರೆದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮನೆಗೆ ವಾಪಸ್ ಆಗಿದ್ದರು. ಬಳಿಕ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೇಲಾಧಿಕಾರಿಗಳ ಒತ್ತಡದಿಂದ ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಅನಿಲ್ ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಜೋಗಫಾಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.