– ಯುವತಿಯ ಜೊತೆಗಿನ ಏಕಾಂತದ ದೃಶ್ಯ ಚಿತ್ರೀಕರಿಸಿದ್ದ ಆರೋಪಿಗಳು
– ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್
ಶಿವಮೊಗ್ಗ: ಪ್ರೀತಿ ಹೆಸರಲ್ಲಿ ಮೋಸ ಹೋದ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೊಂದಿಚಟ್ನಹಳ್ಳಿಯಲ್ಲಿ ನಡೆದಿದೆ.
ಗೊಂದಿಚಟ್ನಹಳ್ಳಿಯ ಸುಪ್ರಿಯಾ (19) ಆತ್ಮಹತ್ಯೆ ಶರಣಾದ ಯುವತಿ. ಪ್ರೀತಿಸಿದ ತಪ್ಪಿಗೆ ಪ್ರೀತಿ ಮಾಡಿದ ಇಬ್ಬರು ಯುವಕರಿಂದ ಸಾಕಷ್ಟು ನೊಂದಿದ್ದ ಯುವತಿ ಎರಡು ದಿನಗಳ ಹಿಂದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಓರ್ವ ಆರೋಪಿಯ ಬಂಧನದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಮೃತ ಸುಪ್ರಿಯಾ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು. ಈಗಾಗಿಯೇ ಈ ಯುವತಿಯ ಜೊತೆ ಪ್ರೀತಿಯ ನಾಟಕವಾಡಿದ್ದ ಯುವಕರಿಗೆ ಪ್ರೀತಿಗಿಂತ ಈಕೆಯೇ ಆಸ್ತಿ ಮೇಲೆಯೇ ಕಣ್ಣು ಬಿದ್ದಿತ್ತು. ಈ ಮೊದಲು ಮೃತ ಯುವತಿ ಸುಪ್ರಿಯಾ ಅದೇ ಗ್ರಾಮದ ತನ್ನದೇ ಜಾತಿಯವನಾದ ಸಾಗರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಊರು ತುಂಬೆಲ್ಲಾ ಒಟ್ಟಿಗೆ ಸುತ್ತುತ್ತಿದ್ದರು. ಈ ವಿಷಯ ಸುಪ್ರಿಯಾ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೂ ತಿಳಿದಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಒಂದೇ ಜಾತಿಯವರು ಬೇರೆ ಇಂದಲ್ಲಾ ನಾಳೆ ಮದುವೆ ಆಗುತ್ತಾರೆ ಅಂತಾ ಸುಮ್ಮನಾಗಿದ್ದರು.
ಆದರೆ ಈ ಕಿರಾತಕ ಯುವಕ ತನ್ನ ಮೇಲೆ ಸಾಗರದಷ್ಟೇ ಪ್ರೀತಿ ಇಟ್ಟುಕೊಂಡಿದ್ದ ಯುವತಿಗೆ ಮೋಸ ಮಾಡಿದ್ದ. ಸಾಗರ್ಗೆ ಪ್ರೀತಿಗಿಂತ ಆಕೆಯ ಬಳಿಯಿದ್ದ ಹಣವೇ ಪ್ರಿಯವಾಗಿತ್ತು. ಹೀಗಾಗಿ ಸುಪ್ರಿಯಾ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಅದನ್ನು ತೋರಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಅಲ್ಲದೇ ಗೆಳತಿಯ ಬಳಿಯಿದ್ದ ಹಣ ಹಾಗೂ ಚಿನ್ನದ ಸರವನ್ನು ಕಿತ್ತುಕೊಂಡಿದ್ದ. ಇದಾದ ಮೂರು ನಾಲ್ಕು ತಿಂಗಳಿನಲ್ಲಿಯೇ ರಸ್ತೆ ಅಪಘಾತವಾಗಿ ಸಾಗರ್ ಕಾಲು ಕಳೆದುಕೊಂಡ. ಹೀಗಾಗಿ ಇಬ್ಬರ ಪ್ರೀತಿಯೂ ಕೊನೆಯಾಯ್ತು.
ಹಳೆಯ ಪ್ರೀತಿ ಮಾಸುತ್ತಿದ್ದ ಮುನ್ನವೇ ಸುಪ್ರಿಯಾಗೆ ಚಿತ್ರದುರ್ಗ ಮೂಲದ ಯುವಕನೋರ್ವನ ಪರಿಚಯವಾಗಿತ್ತು. ಈ ಯುವಕ ಅನ್ಯ ಕೋಮಿಗೆ ಸೇರಿದ್ದರೂ ತಾನು ವೀರಶೈವ ಲಿಂಗಾಯಿತ ಜಾತಿಗೆ ಸೇರಿದವನು ತನ್ನ ಹೆಸರು ಸುಬ್ಬು ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ಮೂಲ, ಅಸಲಿ ಹೆಸರು ಸುಭಾನ್ ಅಂತ.
ಆರಂಭದಲ್ಲಿ ಇಬ್ಬರೂ ಚಾಟಿಂಗ್ನಲ್ಲಿ ಮಾತ್ರ ಸಂಭಾಷಣೆ ನಡೆಸುತ್ತಿದ್ದರು. ಆದರೆ ನಂತರ ಸುಪ್ರಿಯಾಳ ಮನೆಗೆ ಬರಲಾರಂಭಿಸಿದ್ದ. ಆಕೆಯ ತಂದೆ ತಾಯಿಯ ಬಳಿ ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ಸಹ ನಂಬಿಸಿದ್ದ.
ಈ ನಡುವೆ ಸುಪ್ರಿಯಾ ಪ್ರಿಯಕರ ಸುಭಾನ್ ಬಳಿ ತನ್ನ ತಂದೆ ಜಮೀನು ಮಾರಾಟ ಮಾಡಿದ್ದಾರೆ. ಅದರಿಂದ ಸಾಕಷ್ಟು ಹಣ ಬಂದಿದೆ ಎಂದು ತಿಳಿಸಿದ್ದಳು. ಈ ಹಣದ ಮೇಲೆ ಕಣ್ಣು ಹಾಕಿದ್ದ ಸುಭಾನ್ ಪ್ರಿಯಾಳೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋ ತೋರಿಸಿ 45 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಇದರಿಂದ ಆತಂಕಗೊಂಡ ಸುಪ್ರಿಯಾ ಪೋಷಕರು ಸುಭಾನ್ ಬ್ಯಾಂಕ್ ಖಾತೆಗೆ 1.25 ಲಕ್ಷ ರೂ. ಹಣವನ್ನು ಹಾಕಿದ್ದರು. ಇಷ್ಟಕ್ಕೆ ಸುಮ್ಮನಾಗದ ಕಿರಾತಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಆರೋಪಿಯ ಕಾಟ ಯಾವಾಗ ಹೆಚ್ಚಾಗತೊಡಗಿತೋ ಬೇರೆ ದಾರಿ ಕಾಣದೇ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಿವಮೊಗ್ಗ ಗ್ರಾಮಾಂತರ ಠಾಣಾ ಪೊಲೀಸರು ಇದನ್ನು ಆರಂಭದಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಶವ ಪರೀಕ್ಷೆ ನಡೆಯುತ್ತಿದ್ದ ವೇಳೆ ಸುಭಾನ್ ಕಾಣಿಸಿಕೊಂಡಿದ್ದ. ಸುಭಾನ್ನನ್ನು ಈ ಮೊದಲೇ ನೋಡಿದ್ದ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆ ನಂತರದಲ್ಲಿ ಪೊಲೀಸರು ಅಸ್ವಾಭಾವಿಕ ಸಾವು ಎಂಬ ಮೊಕದ್ದಮೆ ಬದಲಾಯಿಸಿ ಪೋಷಕರು ನೀಡಿದ ದೂರನ್ನಾಧರಿಸಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಯುವತಿ ಜೊತೆ ಖಾಸಗಿ ಕ್ಷಣದ ವಿಡಿಯೋ ಇದ್ದ ಮೊಬೈಲ್ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಹಣಕ್ಕೆ ಪೀಡಿಸಿದ್ದ ಸಾಕ್ಷ್ಯಾಧಾರ ಸಹ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಭಾನ್ನನ್ನು ಮೊದಲನೇ ಆರೋಪಿ ಹಾಗೂ ಸಾಗರ್ನನ್ನು ಎರಡನೇ ಆರೋಪಿಯನ್ನಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.