ಹೇಡಿಗಳ ಬೆದರಿಕೆ ಕರೆಗೆ ಜಗ್ಗುವುದಿಲ್ಲ: ಸಚಿವ ಈಶ್ವರಪ್ಪ

Public TV
2 Min Read
ESHWARAPPA 1

ಶಿವಮೊಗ್ಗ: ನಾನು ಹೇಡಿಗಳ ಬೆದರಿಕೆ ಕೃತ್ಯಕ್ಕೆ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕರೆ ಮಾಡಿ ಬೆದರಿಕೆ ಹಾಕಿದವರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು ನಿನ್ನೆ ನನ್ನ ಆಪ್ತ ಸಹಾಯಕ ಸಂತೋಷ್ ಬಳಿ ಮೊಬೈಲ್ ಇದ್ದ ಸಂದರ್ಭದಲ್ಲಿ, ದೂರವಾಣಿ ಬೆದರಿಕೆ ಕರೆ ಬಂದಿತ್ತು. ಸಿಎಎ ಬಗ್ಗೆ ಮತ್ತು ಆರ್ಟಿಕಲ್ 370 ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ 48 ಗಂಟೆಯೊಳಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.

eshwarappa

ಈ ರೀತಿಯ ಯಾವುದೇ ಹೆದರಿಕೆ-ಬೆದರಿಕೆ ತಂತ್ರ ಮಾಡುವ ಸಂಸ್ಥೆಗಳ ಕೃತ್ಯಕ್ಕೆ ನಾನು ಬಗ್ಗುವವನಲ್ಲ. ಚೆನ್ನೈ ಮೂಲದ ಲ್ಯಾಂಡ್ ಲೈನ್ ನಂಬರ್ ನಿಂದ ಮೊದಲು ನನಗೆ ಮಿಸ್ಡ್ ಕಾಲ್ ಬಂದಿತ್ತು. ಆ ನಂತರ ಅನಾಮಧೇಯ ನಂಬರ್ ನಿಂದ ಕರೆ ಬಂದಿತ್ತು. ಈ ಅನಾಮಧೇಯ ನಂಬರ್ ಮೂಲಕ ತಮಿಳು, ಹಿಂದಿ, ಉರ್ದು ಮಿಕ್ಸ್ ಭಾಷೆಯಲ್ಲಿ ಮಾತನಾಡಿದರು ಎಂದರು.

ದೇಶದಲ್ಲಿ ರಾಕ್ಷಸಿ ಪ್ರವೃತ್ತಿಯಿಂದ ರಾಷ್ಟ್ರೀಯ ವಿಚಾರಕ್ಕೆ ಹೆದರಿಸುವ ದಬ್ಬಾಳಿಕೆ ಪ್ರಯತ್ನ ನಡೆಯುತ್ತಿದೆ. ಈ ದೇಶದಲ್ಲಿ ಇದಕ್ಕೆಲ್ಲಾ ಇವರಿಗೆ ಬೆಲೆ ಸಿಗುವುದಿಲ್ಲ. ರಾಷ್ಟ್ರದ್ರೋಹಿ ಚಟುವಟಿಕೆಗಳಿಗೆ ನಮ್ಮ ಸರ್ಕಾರ ಬಿಗಿಯಾದ ಕ್ರಮ ತೆಗೆದುಕೊಳ್ಳಲಿದೆ. ಈ ಬೆದರಿಕೆ ಮೂಲಕ ನಮ್ಮ ಚಟುವಟಿಕೆ ನಿಲ್ಲಿಸಲು ಯೋಚನೆ ಮಾಡಿದರೆ ಅದು ಸಾಧ್ಯವಾಗುವುದಿಲ್ಲ ಎಂದು ಸಚಿವರು ತಿಳಿಸಿದರು.

ಕದ್ದು ಮುಚ್ಚಿ ಕರೆ ಮಾಡುತ್ತಾರೆ. ನೇರವಾಗಿಯಾದರೂ ನನ್ನ ನಂಬರಿಗೆ ಕರೆ ಬಂದರೆ ಎದುರಿಸಬಹುದು. ಯಾವುದೋ ಯಾವುದೋ ದೂರವಾಣಿ ನಂಬರ್ ಗಳಿಂದ ಕರೆ ಮಾಡುತ್ತಾರೆ. ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆಗೆ ಮೌಖಿಕ ದೂರು ಸಲ್ಲಿಸಿದ್ದೇನೆ. ಲಿಖಿತ ದೂರು ಸಲ್ಲಿಸಲು ಎಸ್.ಪಿ. ತಿಳಿಸಿದ್ದಾರೆ. ಲಿಖಿತ ದೂರು ಸಲ್ಲಿಸಲ್ಲಿದ್ದೇನೆ. ಈಗಾಗಲೇ ಎಡಿಜಿಪಿ ಕಮಲ್ ಪಂತ್ ಮತ್ತು ಗೃಹ ಸಚಿವರಿಗೂ ಈ ಬಗ್ಗೆ ತಿಳಿಸಿದ್ದೇನೆ. ಹೀಗಾಗಿ ನನಗೆ ಗನ್ ಮ್ಯಾನ್ ನೀಡಿ ಸೂಕ್ತ ಭದ್ರತೆ ನೀಡಲಾಗಿದೆ ಎಂದರು.

phone

ಈ ಹಿಂದೆ ದುಬೈನಿಂದ ಒಂದು ಬೆದರಿಕೆ ಕರೆ ಬಂದಿತ್ತು. ಹಿಂದಿನ ಕರೆ ದೂರಿನ ಬಗ್ಗೆ ತನಿಖೆ ನಡೆಸಲಾಗಿತ್ತು. ಆದರೆ ಆ ದೂರವಾಣಿ ನಂಬರ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅವರು ಹೇಡಿಗಳು ಮಾಡುವ ರೀತಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಬೆದರಿಕೆ ಹಾಕುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಬಗ್ಗೆ ನಾವು ಜಾಗೃತರಾಗಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಲು ನಾನು ಬಯಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *