ಶಿವಮೊಗ್ಗ: ವ್ಯಕ್ತಿ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹಾಗೂ ಪ್ರತಿಷ್ಠಿತ ಕಂಪನಿಯ ಕಾರುಗಳ ಚಕ್ರಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಹಳೆನಗರ ಬಡಾವಣೆಯ ನಿತಿನ್ ಶೆಟ್ಟಿ (25), ಧರ್ಮ (30) ಬಂಧಿತ ಆರೋಪಿಗಳು.
ವಿನೋಬನಗರ ಠಾಣಾ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ವಿಪ್ಟ್ ಕಾರಿನಲ್ಲಿ ಬಂದ ಇಬ್ಬರು, ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದನ್ನು ಗಮನಿಸಿ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿ ತಪಾಸಣೆ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪ ಸಹ ಈ ಆರೋಪಿಗಳ ಮೇಲಿದೆ. ಆರೋಪಿಗಳಿಂದ 60 ಸಾವಿರ ನಗದು, ಮಾರುತಿ ಸ್ವಿಪ್ಟ್ ಕಾರು ಹಾಗೂ ಕಳ್ಳತನ ಮಾಡಿದ್ದ ಕಾರಿನ ಚಕ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.