ಶಿವಮೊಗ್ಗ: ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದು ಪ್ರವಾಸಿಗರನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ ಬಳಿ ನಡೆದಿದೆ.
ಕೆಲ ಪ್ರವಾಸಿಗರು ಶನಿವಾರ ಮಧ್ಯಾಹ್ನ ಯಡೂರಿನ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದರು. ಅಬ್ಬಿ ಫಾಲ್ಸ್ ನಲ್ಲಿ ಸುಮಾರು 200 ಅಡಿ ಆಳಕ್ಕೆ ನೀರು ಜಿಗಿಯುತ್ತದೆ. ಫಾಲ್ಸ್ ವೀಕ್ಷಣೆ ವೇಳೆ ಐವರು ಕಾಲು ಜಾರಿ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ಐವರ ಪೈಕಿ ಒಬ್ಬರು ಸುಮಾರು 20 ಅಡಿ ಆಳಕ್ಕೆ ಹೋಗಿದ್ದರು.
ನೀರಿನಲ್ಲಿ ಕೊಚ್ಚಿ ಹೋಗಿ ಕಲ್ಲಿನ ಆಸರೆ ಪಡೆದಿದ್ದ ಪ್ರವಾಸಿಗರು ಯಾರಾದರು ಬಂದು ನಮ್ಮನ್ನು ರಕ್ಷಣೆ ಮಾಡಿ ಎಂದು ಕೂಗುತ್ತಿದ್ದರು. ಇದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ ಐವರನ್ನೂ ಸ್ಥಳೀಯರು ರಕ್ಷಿಸಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಲ್ಲು ಬಂಡೆಯ ನಡುವೆ ಕೊಚ್ಚಿ ಹೋಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಕೂದಲೆಳೆ ಅಂತರದಲ್ಲಿ ದೊಡ್ಡ ಅಪಾಯ ತಪ್ಪಿದೆ. ರಕ್ಷಣಾ ಕಾರ್ಯಾಚಣೆ ಕೈಗೊಂಡ ಯುವಕರು ಹಾಗೂ ಸ್ಥಳೀಯರ ಸಮಯ ಪ್ರಜ್ಞೆ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.