ಹುಬ್ಬಳ್ಳಿ: ತಂದೆ ಶಿವಳ್ಳಿ ಸಾವಿನ ದುಃಖದ ಮಧ್ಯೆಯೂ ಅವರ ಎರಡನೇ ಮಗಳು ಕಣ್ಣೀರು ಹಾಕುತ್ತಲೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಿ. ಎಸ್ ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ಇರುವ ಕೆಎಲ್ಈ ಕಾಲೇಜಿ ನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಂದು ರೂಪ ಹುಬ್ಬಳ್ಳಿಯ ಸೆಂಟ್ ಆಂಟೋನಿ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಳೆ. ರೂಪಾ 10ನೇ ತರಗತಿಯ ಸಿಬಿಎಸ್ಇ ಇಂಗ್ಲೀಷ್ ಪರೀಕ್ಷೆ ಬರೆಯುತ್ತಿದ್ದಾಳೆ.
ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಹಾಜರಿದ್ದು, ಎಲ್ಲಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ವೇಳೆಯೇ ಅವರು ಬಳಲಿದ್ದರು ಎಂಬ ಮಾಹಿತಿ ಲಭಿಸಿತು.
ಕಳೆದ 2 ದಿನಗಳಿಂದ ಕಟ್ಟಡ ಕುಸಿತ ಸ್ಥಳದಲ್ಲೇ ಇದ್ದ ಅವರು ಗುರುವಾರ ಸಿಎಂ ಕುಮಾರಸ್ವಾಮಿ ಅವರು ಆಗಮಿಸಿದ್ದ ವೇಳೆಯೂ ಸಿಎಂ ಅವರೊಂದಿಗೆ ಇದ್ದರು. ಹೆಚ್ಚಿನ ಸಮಯ ಸ್ಥಳದಲ್ಲೇ ಇದ್ದ ಸಚಿವರು ಬಳಲಿದ್ದ ಪರಿಣಾಮ ಕಿಮ್ಸ್ ಆಸ್ಪತ್ರೆಯ ವೈದ್ಯರು ಬಳಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಸಚಿವರು ಮತ್ತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಸಂಭವಿಸಿತ್ತು.
ಕಳೆದ ತಿಂಗಳು ಅಭಿವೃದ್ಧಿ ಕಾರ್ಯಕ್ರಮಕ್ಕೆ ಉದ್ಘಾಟನೆ ನಡೆಸಿ ಅಲ್ಲಿ ಆಹಾರ ಸೇವಿಸಿದ್ದ ಸಚಿವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಆ ಬಳಿಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದರು. ಮೂರು ತಿಂಗಳಿಗೊಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಟ್ಟಡ ಕುಸಿತ ದುರಂತದ ಬಳಿಕ ಹೆಚ್ಚಿನ ವಿಶ್ರಾಂತಿ ಪಡೆಯದೆ ಜವಾಬ್ದಾರಿ ನಿರ್ವಹಿಸಿದ್ದರು. ಪರಿಣಾಮ ಹೃದಯಘಾತ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ.
https://www.youtube.com/watch?v=AH1OxAUo0qQ