ಬೆಂಗಳೂರು: ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಹಗರಣ ಸದ್ದು ಮಾಡುತ್ತಿದ್ದು, ಹೂಡಿಕೆದಾರರು ಎಲೆಕ್ಷನ್ ನಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ಎಲ್ಲಾ ಪಕ್ಷಗಳ ಮುಖಂಡರುಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಉಪಚುನಾವಣೆ ರಂಗು ಪಡೆದುಕೊಂಡಿರುವ ಶಿವಾಜಿ ನಗರದಲ್ಲಿ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಅಭ್ಯರ್ಥಿಗಳ ವಿರುದ್ಧ ಸಿಡಿದೆದಿದ್ದಾರೆ. ಕಳೆದ ಆರೇಳು ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಐಎಂಎ ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ.
ಈ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಹೂಡಿಕೆದಾರರಿಗೆ ಇದುವರೆಗೂ ಯಾವ ಸರ್ಕಾರ ಹಾಗೂ ಯಾವೊಬ್ಬ ಅಭ್ಯರ್ಥಿಗಳು ನ್ಯಾಯ ಕೊಡಿಸಿಲ್ಲ. ನಮಗೆ ಅನ್ಯಾಯವಾಗಿದೆ. ಹೀಗಾಗಿ ಕೆಲ ಮತದಾರರು ಈ ಸಲ ನಮ್ಮ ವೋಟ್ ನೋಟಾಗೆ ಅಂದರೆ, ಮತ್ತೇ ಕೆಲವರು ನಮಗೆ ಎಲೆಕ್ಷನ್ ಬೇಡ ಯಾರಿಗೂ ವೋಟ್ ಹಾಕಲ್ಲ ಎಂದು ಹೇಳುತ್ತಿದ್ದಾರೆ.
ಐಎಂಎನಲ್ಲಿ ಸುಮಾರು 63 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿದ್ದು, ಇವರಲ್ಲಿ ಅತಿ ಹೆಚ್ಚು ಶಿವಾಜಿನಗರದ ಸ್ಥಳೀಯರೇ ಇದ್ದಾರೆ. ಅದರಲ್ಲೂ ಶೇಕಡ 60 ರಿಂದ 70ರಷ್ಟು ಮುಸ್ಲಿಂ ಸಮುದಾಯದವರೇ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಶಿವಾಜಿನಗರದ ಅಭ್ಯರ್ಥಿಗಳಿಗೆ ಐಎಂಎ ದೊಡ್ಡ ತಲೆ ಬಿಸಿಯಾಗಿದೆ. ಇನ್ನೂ ಕೆಲವರು ಐಎಂಎ ಆಸ್ತ್ರವನ್ನ ಪ್ರಣಾಳಿಕೆಯನ್ನಾಗಿಸಿಕೊಂಡು ಮತ ಪಡೆಯಲು ಮುಂದಾಗಿದ್ದಾರೆ. ಉಪಚುನಾವಣೆಯ ಮತದಾನಕ್ಕೆ ಎರಡು ದಿನಗಳಿವೆ. ಈ ಬೆನ್ನಲ್ಲೆ ಐಎಂಎ ನಲ್ಲಿ ಹಣ ಹೂಡಿದ ಜನರು ಚುನಾವಣೆಯಲ್ಲಿ ‘ನೋಟಾ’ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.