ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಉಪಸಮರದ ಸಮಯದಲ್ಲಿ ಕಾಂಗ್ರೆಸ್ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಶಿವಾಜಿನಗರದ ಟಿಕೆಟ್ ಯಾರಿಗೆ ನೀಡಬೇಕೆಂಬ ವಿಚಾರದಲ್ಲಿ ಕಳೆದೊಂದು ವಾರದಿಂದ ಕಾಂಗ್ರೆಸ್ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿವೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ಶಿವಾಜಿನಗರದ ಟಿಕೆಟ್ ನ್ನು ರಿಜ್ವಾನ್ ಅರ್ಷದ್ ಅವರಿಗೆ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ರಿಜ್ವಾನ್ ಅರ್ಷದ್ ಅವರಿಗೆ ಎರಡು ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈಗ ಮತ್ತೆ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡೋದು ಬೇಡ ಎಂದು ಮೂಲ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ಹಾಕಿದ್ದಾರೆ. ಸಲೀಂ ಅಹಮ್ಮದ್ ಅಥವಾ ಹುಸೇನ್ಗೆ ಟಿಕೆಟ್ ನೀಡುವಂತೆ ಮೂಲ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಯೊಂದು ವಿಚಾರದಲ್ಲಿ ಸಿದ್ದರಾಮಯ್ಯರದದೆ ಮೇಲುಗೈ ಏಕೆ? ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲ್ಲಲಿಲ್ಲ. ಪದೇ ಪದೇ ಒಬ್ಬರಿಗೆ ಅವಕಾಶ ನೀಡೋದು ಸರಿ ಅಲ್ಲ. ಬೇರೆಯವರಿಗೂ ಅವಕಾಶ ನೀಡಬೇಕೆಂದು ಮೂಲ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.