ಬೆಂಗಳೂರು: ಸಮ್ಮಿಶ್ರ ಸರ್ಕಾರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ತಮ್ಮ ರಾಜೀನಾಮೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ರೋಷನ್ ಬೇಗ್, ನಾನು ರಾಜ್ಯ ಹಜ್ ಕಮೀಟಿ ಅಧ್ಯಕ್ಷನಾಗಿದ್ದು, ಕಳೆದ ಐದು ದಿನಗಳಿಂದ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಎಲ್ಲ ಯಾತ್ರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಜ್ ಭವನದಲ್ಲಿ ಬ್ಯುಸಿ ಆಗಿದ್ದೆ. ಇಂದು ರಾತ್ರಿ ಯಾತ್ರಿಗಳು ಹಜ್ ನತ್ತ ಪ್ರಯಾಣಿಸುತ್ತಾರೆ. ಹಜ್ ಯಾತ್ರಿಗಳನ್ನು ಸುರಕ್ಷಿತವಾಗಿ ಕಳುಹಿಸುವುದು ನನ್ನ ಮೊದಲ ಜವಾಬ್ದಾರಿ ಆಗಿತ್ತು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ಕೆಲ ಶಾಸಕರು ರಾಜೀನಾಮೆ ವಾಪಸ್?
ಕಾಂಗ್ರೆಸ್ ನನ್ನನ್ನು ಈಗಾಗಲೇ ಅಮಾನುತು ಮಾಡಿದೆ. ಅಂದು ನಾನು ಆಡಿದ್ದ ಮಾತುಗಳೇ ದೊಡ್ಡ ಅಪರಾಧವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ 14 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಂದಿದೆ. ಬೇರೆ ಯಾವ ಕ್ಷೇತ್ರದ ಅಭ್ಯರ್ಥಿಯೂ ಈ ಕೆಲಸವನ್ನು ಮಾಡಲಿಲ್ಲ. ಕೋಲಾರಲ್ಲಿ ದಲಿತ ನಾಯಕನನ್ನು ಸೋಲಿಸುತ್ತೇವೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದರು. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದರು. ಅಂತವರ ವಿರುದ್ಧ ಪಕ್ಷ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬಡಪಾಯಿಯಾದ ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜೀನಾಮೆ ನೀಡಲು ಸಿಎಂ ನಿರ್ಧಾರ?
ಇನ್ನು ನಾಲ್ಕೈದು ದಿನ ಹಜ್ ಯಾತ್ರಿಗಳ ಕೆಲಸ ಮುಗಿಯುತ್ತದೆ. ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂಬುದನ್ನು ಮಾಧ್ಯಮದವರಿಗೆ ತಿಳಿಸುತ್ತೇನೆ. ರಾಜೀನಾಮೆ ನೀಡಲು ಮುಂದಾಗಿರುವ 7 ರಿಂದ 8 ಶಾಸಕರಲ್ಲಿ ನಾನು ಇರಬಹುದು. ಒಂದು ವೇಳೆ ನಾನು ರಾಜೀನಾಮೆ ನೀಡಿದ್ರೆ ಯಾವುದೇ ತಪ್ಪಿಲ್ಲ. ಇಂದು ಕಾಂಗ್ರೆಸ್ ಅವರಿಗೆ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ನೆನಪಿಗೆ ಬಂದಿದ್ದಾರೆ ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ
ರಾಜಕೀಯ ಸಮನ್ವಯತೆ ಪಕ್ಷಗಳಲ್ಲಿ ಚೆನ್ನಾಗಿದ್ದಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು. ಈ ವೇಳೆ ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡಲು ಇಚ್ಛಿಸಲ್ಲ. ರಾಮಲಿಂಗಾ ರೆಡ್ಡಿ ಮತ್ತು ನಾವು ವಿದ್ಯಾರ್ಥಿ ಚಳುವಳಿಯ ಸಮಯದಿಂದ ರಾಜಕೀಯದಲ್ಲಿದ್ದವರು. ಲೋಕಸಭಾ ಚುನಾವಣೆಯಲ್ಲಿ ಯಾವ ನಾಯಕರು ರಾಮಲಿಂಗಾ ರೆಡ್ಡಿ ಅವರನ್ನು ಸಂಪರ್ಕಿಸಿ ಸಲಹೆ ಪಡೆಯಲಿಲ್ಲ. ಇದೀಗ ಎಲ್ಲರಿಗೂ ನಾವು ಬೇಕಾಗಿದ್ದೇವೆ. ಎರಡ್ಮೂರು ದಿನಗಳಲ್ಲಿ ನನ್ನ ರಾಜಕೀಯ ನಿರ್ಧಾರ ತಿಳಿಸುತ್ತೇನೆ. ನನಗೆ ಮಂತ್ರಿ ಆಗಲು ಇಷ್ಟವಿಲ್ಲ. ಯಾವ ಮಂತ್ರಿ ಪದವಿಯೂ ನನಗೆ ಬೇಡ ಎಂದರು. ಇದನ್ನೂ ಓದಿ: ಏನೇನಾಗುತ್ತೆ ಕಾದು ನೋಡೋಣ, ಅತೃಪ್ತರ ಜೊತೆ ನಮ್ಮ ನಾಯಕರಿಲ್ಲ- ಬಿಎಸ್ವೈ