ಚಿಕ್ಕೋಡಿ/ಬೆಳಗಾವಿ: ಕಳೆದ ದಿನವಷ್ಟೇ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ದಹಿಸಿ ಕನ್ನಡಿಗರ ಭಾವನೆ ಕೆರಳಿಸಿದ ಶಿವಸೇನೆ ಕಾರ್ಯಕರ್ತರ ಪುಂಡಾಟ ಇಂದು ಕೂಡ ಮುಂದುವರೆದಿದೆ.
ಕೊಲ್ಲಾಪೂರರದಲ್ಲಿ ಇಂದು ಶಿವಸೇನೆ ಕಾರ್ಯಕರ್ತರು ಕರವೇ ಹಾಗೂ ಕನ್ನಡ ಸಂಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಲಿದೆ. ಶನಿವಾರ ರಾತ್ರಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಹೊರಟ್ಟಿ ಪ್ರತಿಕೃತಿ ದಹಿಸಿ ಶಿವಸೇನೆ ಕಾರ್ಯಕರ್ತರು ಪುಂಡಾಟಿಕೆ ನಡೆಸಿದ್ದರು.
ಶಿವಸೇನೆ ಪುಂಡಾಟಿಕೆಗೆ ರಾಜ್ಯಾದ್ಯಂತ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಎರಡೂ ರಾಜ್ಯಗಳ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಎರಡೂ ರಾಜ್ಯಗಳ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ರಾಜ್ಯದ ಗಡಿಯಾದ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೂಗನೋಳಿ ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 2 ಕೆಎಸ್ಆರ್ಪಿ ತುಕಡಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಗಡಿ ಪ್ರವೇಶಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಶಾಂತಿ ಭಂಗಕ್ಕೆ ಮುಂದಾಗುವರ ವಿರುದ್ಧ ಕ್ರಮಕ್ಕೆ ಪೊಲೀಸರು ಸಜ್ಜಾಗಿದ್ದಾರೆ.