ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಬಿಜೆಪಿ ಜೊತೆಗೆ ಮೈತ್ರಿಗೆ ಕೆಲ ಷರತ್ತು ವಿಧಿಸಿ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ.
ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುರುವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ವೇಳೆ ಮತ್ತು ಮುಂಬರುವ ಚುನಾವಣೆಯ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು ಈ ಪೈಕಿ ಶಿವಸೇನೆ 152 ಸ್ಥಾನಗಳನ್ನು ತನಗೆ ನೀಡಬೇಕು. ಅಲ್ಲದೇ ಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಪಕ್ಷಕ್ಕೇ ನೀಡಬೇಕೆಂದು ಬೇಡಿಕೆಯನ್ನು ಇಟ್ಟಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
152 ಸ್ಥಾನಗಳನ್ನು ಶಿವಸೇನೆಗೆ ಬಿಟ್ಟುಕೊಟ್ಟರೆ ಬಿಜೆಪಿಗೆ ಕೇವಲ 136 ಸ್ಥಾನಗಳು ಸಿಗಲಿವೆ. ಆದರೆ ಬಿಜೆಪಿ 130 ಕ್ಕಿಂತ ಹೆಚ್ಚು ಸ್ಥಾನಗಳನ್ನು ಶಿವಸೇನೆಗೆ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಈಗ ಸ್ಥಾನಗಳ ಹಂಚಿಕೆ ಕುರಿತಂತೆ ಉಭಯ ನಾಯಕರು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಶಿವಸೇನೆಯನ್ನು ಪ್ರಬಲಗೊಳಿಸುವುದು ಉದ್ಧವ್ ಠಾಕ್ರೆ ಪ್ರಮುಖ ಗುರಿಯಾಗಿದ್ದು, ಈ ಷರತ್ತನ್ನು ಬಿಜೆಪಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳತ್ತಾ ಎನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
2019ರ ಲೋಕಸಭಾ ಚುನಾವಣೆಯನ್ನು ನಾವು ಏಕಾಂಗಿಯಗಿ ಎದುರಿಸುತ್ತೇವೆ ಎಂದು ಶಿವಸೇನೆ ಹೇಳಿದ್ದರೂ ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗಿದೆ.