ಮುಂಬೈ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮಾಧ್ಯಮದವರಿಗೆ ಮನರಂಜನಾ ಸುದ್ದಿ ನೀಡುತ್ತಿದ್ದಾರೆ ಎಂದು ಶಿವಾಸೇನಾ ವ್ಯಂಗ್ಯವಾಡಿದೆ.
ಮುಖವಾಣಿ ‘ಸಾಮ್ನಾ’ದಲ್ಲಿನ ಸಂಪಾದಕೀಯದಲ್ಲಿ ಚಂದ್ರಬಾಬು ನಾಯ್ಡು ಅವರು ಎಲ್ಲಾ ಪಕ್ಷದವರನ್ನು ಕೇಂದ್ರದಲ್ಲಿ ಒಗ್ಗೂಡಿಸಲು ಹೋಗಿ ಮಾಧ್ಯಮದವರಿಗೆ ಮನರಂಜನಾ ಸುದ್ದಿ ನೀಡುತ್ತಿದ್ದಾರೆ ಎಂದು ಬರೆಯಲಾಗಿದೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಚಂದ್ರಬಾಬು ನಾಯ್ಡು ದೇಶದಲ್ಲಿನ ಉಳಿದ ಎಲ್ಲಾ ಸ್ಥಳೀಯ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಚಂದ್ರಬಾಬು ನಾಯ್ಡು ಅವರು ಬಿಜೆಪಿ ಬಿಟ್ಟು ದೇಶದ ಎಲ್ಲಾ ಪಕ್ಷಗಳ ಮುಖ್ಯಸ್ಥರನ್ನು ಭೇಟಿಮಾಡುತ್ತಿದ್ದಾರೆ. ಈ ಪ್ರಯತ್ನ ಮಾಧ್ಯಮದವರಿಗೆ ಮನರಂಜನೆ ನೀಡುತ್ತಿದೆ ಎಂದು ಶಿವಾಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.
ಇದೇ ವೇಳೆ ಪ್ರಧಾನಿ ಮೋದಿ ಅವರು ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಶಿವಾಸೇನಾ, ಮೋದಿ ಅವರ ಧಾರ್ಮಿಕ ನಿಲುವುಗಳನ್ನು ನೋಡಿ ವಿರೋಧ ಪಕ್ಷದವರು ಹೆದರುತ್ತಿದ್ದಾರೆ. ಇದು ಪ್ರಧಾನಿ ಅವರ ಹಿಂದುತ್ವ ಮತ್ತು ವಿರೋಧ ಪಕ್ಷದವರ ನಕಲಿ ಜಾತ್ಯಾತೀತತೆಯ ನಡುವೆ ನಡೆಯುತ್ತಿರುವ ಹೋರಾಟ ಎಂದು ವ್ಯಾಖ್ಯಾನಿಸಿದೆ.
ಶಿವಾಸೇನಾದ ಪ್ರಕಾರ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ವಿರೋಧ ಪಕ್ಷದವರು ಕೇವಲ ಮೋದಿ ಅವರನ್ನು ಅಧಿಕಾರದಿಂದ ದೂರ ಮಾಡುವ ಯೋಚನೆ ಮಾಡಬಹುದು ಅದನ್ನು ಬಿಟ್ಟರೆ ಮೋದಿ ಅವರನ್ನು ಸೋಲಿಸಲು ಆಗುವುದಿಲ್ಲ ಎಂದು ಹೇಳಿದೆ.