ಬೆಳಗಾವಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿದ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೂ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಿಸಿ ತಟ್ಟಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಶಿವಸೇನೆ ಪುಂಡರು ಅಡ್ಡಿ ಮಾಡಿದ್ದಾರೆ. ಕೊಲ್ಲಾಪೂರ ನಗರದ ಅಪ್ಸರಾ ಚಿತ್ರಮಂದಿರಕ್ಕೆ ನುಗ್ಗಿದ ಶಿವಸೇನೆಯ ಕಿಡಿಗೇಡಿಗಳು ಚಿತ್ರಮಂದಿರದಲ್ಲಿ ಇದ್ದ ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಚಿತ್ರಮಂದಿರದಲ್ಲಿ ಅಳವಡಿಸಿದ್ದ ಚಿತ್ರದ ಬ್ಯಾನರಗಳನ್ನು ಕೆಳಗಿಳಿಸಿ ಹರಿದಿದ್ದಾರೆ. ಚಿತ್ರಮಂದಿರದ ಮಾಲೀಕ ಪ್ರೇಕ್ಷಕರಿಗೆ ಹಣ ನೀಡಿ ವಾಪಸ್ಸು ಕಳಿಸಿದ್ದು, ಇಂದು ಕೂಡ ಚಿತ್ರ ಪ್ರದರ್ಶನವನ್ನ ರದ್ದು ಗೊಳಿಸಿದ್ದಾರೆ.
ಚಿತ್ರಮಂದಿರಕ್ಕೆ ಅಷ್ಟೇ ಅಲ್ಲದೇ ಕನ್ನಡದಲ್ಲಿ ಮುದ್ರಿಸಿದ್ದ ಫಲಕಗಳಿಗೆ ಶಿವಸೇನೆಯ ಪುಂಡರು ಕಪ್ಪು ಮಸಿ ಬಳಿದಿದ್ದಾರೆ. ಇಂದು ಕೂಡ ಮಹಾರಾಷ್ಟ್ರದಲ್ಲಿ ಶಿವಸೇನೆಯ ಪುಂಡರು ಪ್ರತಿಭಟನೆ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆಯನ್ನು ಖಂಡಿಸಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಇಂದು ಕೂಡ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಸ್ ಸಂಚಾರ ರಾತ್ರಿಯಿಂದ ಆರಂಭವಾಗಿದ್ದರು ಯಾವುದೇ ಅಹಿತಕರ ಘಟನೆ ನಡೆದರೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗುವದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.