ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರಿಗೆ ಲಭ್ಯವಾಗಿದೆ. ಕೆಎಂಸಿಯ ವೈದ್ಯರು ಎಂಟು ಪುಟಗಳ ಪೋಸ್ಟ್ ಮಾರ್ಟಮ್ ವರದಿಯನ್ನು ಪೊಲೀಸರಿಗೆ ನೀಡಿದ್ದಾರೆ.
ಸಾವಿಗೆ ಸಂಬಂಧಿಸಿದ ಮಾಹಿತಿಗಳು ಅದರಲ್ಲಿದ್ದರೂ, ಸಾವಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವೇ ಎರಡು ವರದಿಗಳನ್ನು ತಾಳೆ ಮಾಡಿ ನೋಡಲಾಗುತ್ತದೆ. ಈಗಿನ ವರದಿಯಲ್ಲಿ ಶರೀರದಲ್ಲಿ ಎಲ್ಲೆಲ್ಲಿ ರಕ್ತಸ್ರಾವವಾಗಿತ್ತು, ಅಲ್ಲಿಯವರೆಗೆ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ವಿವರಗಳಿವೆ.
ಶ್ರೀಗಳ ಸಾವಿಗೆ ಕಾರಣವೇನು ಎಂಬುದು ಗೊತ್ತಾಗಲು ಎಫ್.ಎಸ್.ಎಲ್ ವರದಿಗಾಗಿ ಕಾಯಲೇಬೇಕು. ಸದ್ಯಕ್ಕೆ ಕೆಂಎಂಸಿ ವೈದ್ಯರು ಮತ್ತು ಪೊಲೀಸರಿಗೆ ಸಾವಿಗೆ ಕಾರಣವಾದ ಅಂಶ ಏನು ಎಂದು ಗೊತ್ತಾಗಿದ್ದರೂ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವೇ ಅದನ್ನು ಬಹಿರಂಗಪಡಿಸಲಾಗುತ್ತದೆ. ಎಫ್ ಎಸ್ ಎಲ್ ವರದಿ ಬರಲು ಆರು ವಾರಗಳು ಬೇಕಾಗಬಹುದು ಎಂದು ಕೆಎಂಸಿ ವೈದ್ಯರು ಮಾಹಿತಿ ನೀಡಿದ್ದಾರೆ.
ಸ್ವಾಮೀಜಿಗಳ ಲಿವರ್, ಅನ್ನನಾಳ, ಕಿಡ್ನಿ ಸಂಪೂರ್ಣ ಕ್ಷೀಣಿಸಿದ್ದು ಕೆಲಸ ಮಾಡುತ್ತಿರಲಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.