ಉಡುಪಿ: ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಇಂದು ಕೃಷ್ಣಮಠದಿಂದ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಿದ್ದಾರೆ.
ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಶ್ರೀಪಾದರು ವೃಂದಾವನಸ್ಥರಾದ ಮೇಲೆ ಪಟ್ಟದ ದೇವರು ದ್ವಂದ್ವ ಮಠಕ್ಕೆ ಹಸ್ತಾಂತರ ಆಗಬೇಕು. ಈ ಹಿನ್ನೆಲೆಯಲ್ಲಿ ಅನ್ನವಿಠಲ ದೇವರನ್ನು ದ್ವಂದ್ವ ಮಠವಾದ ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರ ಪಾಲಾಗಿದೆ.
ನಾಲ್ಕು ತಿಂಗಳಿಂದ ಕೃಷ್ಣಮಠದಲ್ಲೇ ಪೂಜಿಸಲ್ಪಡುತ್ತಿದ್ದ ಶಿರೂರು ಮಠದ ಅನ್ನ ವಿಠಲ ದೇವರನ್ನು ಕೃಷ್ಣಮಠದಿಂದ ವಿಶ್ವವಲ್ಲಭ ತೀರ್ಥ ಶ್ರೀಗಳು ಪಡೆದು ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸುತ್ತಿದ್ದಾರೆ.
ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಪಟ್ಟದ ದೇವರನ್ನು ಹಸ್ತಾಂತರ ಮಾಡಿದ್ದಾರೆ. ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕದ ತನಕ ಸೋದೆ ಶ್ರೀಗಳಿಂದ ಪಟ್ಟದ ದೇವರಿಗೆ ಪೂಜೆ ನಡೆಯಲಿದೆ. ಶಿರೂರು ಸಾವಿಗೂ ಮುನ್ನ ಪಟ್ಟದ ದೇವರ ಹಸ್ತಾಂತರ ವಿಚಾರಕ್ಕೆ ಭಾರೀ ವಿವಾದ ಏರ್ಪಟ್ಟಿತ್ತು. ಅನ್ನ ವಿಠಲ ದೇವರ ವಿಗ್ರಹಕ್ಕಾಗಿ ಪಟ್ಟು ಹಿಡಿದಿದ್ದ ಶಿರೂರು ಶ್ರೀಗಳು ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಆದರೆ ವಿವಾದದಲ್ಲಿರುವಾಗಲೇ ಶಿರೂರು ಶ್ರೀ ಸಾವನ್ನಪ್ಪಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews