ಶಿವಮೊಗ್ಗ: ರಾಜ್ಯದಲ್ಲಿ ಹಲವಾರು ಕಡೆ ಬರಗಾಲವಿದ್ದು, ಕುಡಿಯುವ ನೀರಿಗೂ ಕಷ್ಟವಾಗಿದೆ. ಆದರೆ ಈ ಬರಗಾಲದ ನಡುವೆಯೂ ಶಿವಮೊಗ್ಗದ ತುಂಗಾ ಡ್ಯಾಂ ತುಂಬಿದ್ದು, ಈ ಮೂಲಕ ಈ ವರ್ಷ ರಾಜ್ಯದಲ್ಲಿ ತುಂಬಿದ ಮೊದಲ ಆಣೆಕಟ್ಟು ಇದಾಗಿದೆ.
ರಾಜ್ಯದಲ್ಲೂ ಬರವಿದ್ದರೂ ಮಲೆನಾಡಿನಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಜನೂರು ಡ್ಯಾಂ ತುಂಬಿದೆ. ಈ ಜಲಾಶಯದ 4 ಗೇಟ್ಗಳ ಮೂಲಕ, 2 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.
ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಜಲಾಶಯದ ನೀರಿನ ಮಟ್ಟ 587.42 ಮೀಟರ್ ತಲುಪಿದೆ. 588.24 ಮೀಟರ್ ಎತ್ತರ ಇರುವ ಗಾಜನೂರು ಡ್ಯಾಂ. 3.25 ಟಿ.ಎಂ.ಸಿ. ನೀರುನ್ನು ಶೇಖರಣೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಡ್ಯಾಂಗೆ 6,600 ಕ್ಯೂಸೆಕ್ ಒಳ ಹರಿವು ಬರುತ್ತಿರುವ ಹಿನ್ನೆಲೆ ಇಂದು ಗೇಟ್ಗಳನ್ನು ತೆಗೆದು ನೀರನ್ನು ನದಿಗೆ ಬಿಡಲಾಗಿದೆ.
ಶೃಂಗೇರಿ. ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ ಹತ್ತು ದಿನಗಳ ಹಿಂದೆಯಷ್ಟೇ, ಡ್ಯಾಂ ತಳ ಕಂಡು ಶಿವಮೊಗ್ಗದಲ್ಲಿ ನೀರಿನ ಅಭಾವವಿದೆ ಎಂದು ಆತಂಕಗೊಂಡಿದ್ದ ಶಿವಮೊಗ್ಗದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.