ಶಿವಮೊಗ್ಗ: ರಾತ್ರಿ ಬಹಿರ್ದೆಸೆಗೆಂದು ಹೊರ ಹೋಗಿದ್ದ ಹುಡುಗಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ನಡೆದಿದೆ.
ಭದ್ರಾವತಿಯ ಸಂಚಿ ಹೊನ್ನಮ್ಮ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಇಂದಿರಾ ಕೊಲೆಯಾದ ಹುಡುಗಿ. ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಇಂದಿರಾ ತನ್ನ ಕಿವಿ ಕೇಳದ, ಮಾತು ಬಾರದ ಇಬ್ಬರು ಚಿಕ್ಕಮ್ಮಂದಿರ ಜೊತೆ ರಾತ್ರಿ ಮಲಗಿದ್ದಾಳೆ. ಮನೆಯ ಹೊರಭಾಗದ ಕೊಠಡಿಯಲ್ಲಿ ಹುಡುಗಿಯ ಸೋದರಮಾವ ಜಗದೀಶ್ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಬಹಿರ್ದೆಸೆಗೆಂದು ಹೊರಗೆ ಹೋದ ಹುಡುಗಿಯನ್ನು ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹುಡುಗಿಯ ಕೊಲೆಗೆ ಕಾರಣ ಏನೂ ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಭದ್ರಾವತಿಯ ಹೊಸಮನೆ ಠಾಣಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.