ಶಿವಮೊಗ್ಗ: ಜಿಂದಾಲ್ ಸಂಸ್ಥೆಗೆ ಜಮೀನು ನೀಡಿದ ವಿವಾದವನ್ನು ಮುಖ್ಯಮಂತ್ರಿಯವರು ಬೇರೆ ಕಡೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಕಳ್ಳಾಟ ಆಡುವುದನ್ನು ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಂದಾಲ್ ವಿಷಯದಲ್ಲಿ ಸರ್ಕಾರದ ಕ್ರಮಕ್ಕೆ ಹಿರಿಯ ಕಾಂಗ್ರೆಸ್ಸಿಗರೇ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕವಾಗಿ ಇದನ್ನು ರದ್ದು ಮಾಡುವ ಬದಲು ಸಚಿವ ಸಂಪುಟದಲ್ಲಿ ಉಪಸಮಿತಿ ರಚನೆ ಮಾಡಿದ್ದಾರೆ. ಅಲ್ಲದೆ ಜನರ ಗಮನ ಬೇರೆಡೆ ಸೆಳೆದು ಅದನ್ನು ವ್ಯಾಪಾರ ಮಾಡುವ ಹುನ್ನಾರದಲ್ಲಿ ಇದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಬಳ್ಳಾರಿ ಜಿಲ್ಲೆಯಲ್ಲಿ ಬ್ರಹ್ಮಿಣಿ ಸ್ಟೀಲ್ಸ್ ಸಂಸ್ಥೆಗೆ ನೀಡಿದ್ದ ಸುಮಾರು ನಾಲ್ಕೂವರೆ ಸಾವಿರ ಎಕರೆ ಭೂಮಿ ಪಡೆದ ಉದ್ದೇಶಕ್ಕೆ ಬಳಕೆ ಆಗದಿದ್ದಲ್ಲಿ ಅದನ್ನು ವಾಪಸ್ ಪಡೆಯಬೇಕು ಎಂದು ಇದೇ ವೇಳೆ ಆಗ್ರಹಿಸಿದರು. ಈ ವಿಚಾರದಲ್ಲಿ ಈ ಹಿಂದೆ ಬಿಎಸ್ವೈ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಸಿಎಂ ಹೇಳಿಕೆಗೆ ತೀರುಗೇಟು ನೀಡಿದ ಅವರು, ನೀವು ಅಷ್ಟು ಪ್ರಾಮಾಣಿಕರಾಗಿದ್ದರೆ, ಯಡಿಯೂರಪ್ಪ ಅಧ್ಯಕ್ಷತೆಯ ಸಮಿತಿ ನೀಡಿದ ವರದಿಯನ್ನು ಸಿಎಂ ಆಗಿದ್ದ ನೀವು ಒಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.
ಇನ್ನು ಐಎಂಎ ಬಹುಕೋಟಿ ಹಗರಣವನ್ನು ಎಸ್ಐಟಿ ಬದಲು ಸಿಬಿಐಗೆ ವಹಿಸಬೇಕು. ಈ ಬಗ್ಗೆ ಸಿಎಂ ಗಮನ ಹರಿಸಲಿ. ಬಡ ಮುಸ್ಲಿಂ ಸಮಾಜದ ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಲಿ. ಈ ವಿಷಯವಾಗಿ ಪಿಎಫ್ಐಯಂತಹ ಸಂಘಟನೆ ಬಡ ಮುಸ್ಲಿಂಮರ ಪರವಾಗಿ ಹೋರಾಟಕ್ಕೆ ಇಳಿಯಲಿ ಎಂದು ಕರೆ ನೀಡಿದರು.