ಲಕ್ನೋ: 100 ಮಿಟರ್ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನ ಸ್ವಾಗತಿಸಿರೋ ರಾಜ್ಯ ಶಿಯಾ ವಕ್ಫ್ ಮಂಡಳಿ ರಾಮನ ಮೂರ್ತಿಗಾಗಿ 10 ಬೆಳ್ಳಿ ಬಾಣಗಳನ್ನು ಉಡುಗೊರೆಯಾಗಿ ನೀಡಲು ಬಯಸಿದೆ.
ಈ ಬಗ್ಗೆ ಸಿಎಂ ಯೋಗಿ ಆಗಿತ್ಯನಾಥ್ಗೆ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಪತ್ರ ಬರೆದಿದ್ದಾರೆ. ಶ್ರೀರಾಮನಿಗೆ ಶಿಯಾಗಳ ಪರವಾಗಿ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಬೆಳ್ಳಿ ಬಾಣಗಳನ್ನ ನೀಡಲಾಗ್ತಿದೆ ಎಂದಿದ್ದಾರೆ.
ಶ್ರೀರಾಮ ಬಾಣಗಳಿಂದ ರಾಕ್ಷಸರನ್ನು ಸಂಹಾರ ಮಾಡಿದ ರಿತಿಯಲ್ಲೇ ಈ ಬಾಣಗಳು ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಸೂಚಿಸುತ್ತದೆ ಎಂದು ರಿಜ್ವಿ ಬರೆದಿದ್ದಾರೆ. ರಾಮ ತನ್ನ ಬಾಣದಿಂದ ರಾಕ್ಷಸರನ್ನು ನಾಶ ಮಾಡಿದಂತೆಯೇ ಭಾರತ ಭಯೋತ್ಪದಾನೆಯಿಂದ ಮುಕ್ತವಾಗುತ್ತದೆ ಎಂದು ಶಿಯಾ ಸಮುದಾಯ ಅಪೇಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಈ ಪ್ರದೇಶದ ನವಾಬರು ಸದಾ ಅಯೋಧ್ಯೆಯ ದೇವಾಲಯಗಳನ್ನ ಗೌರವಿಸಿದ್ದರು. ಕೇಂದ್ರ ಅಯೋಧ್ಯಾದಲ್ಲಿರುವ ಹನುಮಾನ್ ಗರ್ಹಿಯ ಭೂಮಿಯೂ ಕೂಡ 1739ರಲ್ಲಿ ನವಾಬ್ ಶುಜಾ ಉದ್ ದೌಲಾ ದಾನ ಮಾಡಿದ್ದು. ದೇವಾಲಯ ನಿರ್ಮಾಣಕ್ಕೆ ನವಾಬ್ ಆಸಿಫ್ ಉದ್ ದೌಲಾ ಧನಸಹಾಯ ಮಾಡಿದ್ದರು ಎಂದು ರಿಜ್ವಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಸರಯೂ ನದಿಯ ತೀರದಲ್ಲಿ 100 ಮೀಟರ್ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಿಸಲು ಇಲ್ಲಿನ ಬಿಜೆಪಿ ಸರ್ಕಾರ ಯೋಜನೆ ರೂಪಿಸಿದೆ. ಈ ಬಗ್ಗೆ ರಾಜ್ಯಪಾಲರಾದ ರಾಮ್ ನಾಯ್ಕ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.