ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರಿಕ್ (Shariq) ಪ್ಲಾನ್ ಮಾಡಿದ್ದು, ಉಗ್ರನ ಚೈನ್ ಲಿಂಕ್ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಗುಮಾನಿ ಬಂದಿದೆ. ಈತನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳ ತನಿಖೆ ಆರಂಭಗೊಂಡಿದೆ.
ಬಾಂಬ್ ಸ್ಫೋಟಿಸಿದ ಉಗ್ರ ಶಾರಿಕ್ ಪೊಲೀಸ್ ವಶದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ನಡುವೆ ಬಾಂಬ್ ಸ್ಫೋಟದ ಕೃತ್ಯ ಶಾರಿಕ್ ಒಬ್ಬನ ಪ್ಲ್ಯಾನ್ ಆಗಿರಲು ಸಾಧ್ಯವೇ ಇಲ್ಲ. ಈ ಸ್ಫೋಟದ ಹಿಂದೆ ದೊಡ್ಡ ಒಂದು ಜಾಲ ಇದೆ ಎಂಬ ಗುಮಾನಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಕೃತ್ಯದ ಬೆನ್ನು ಬಿದ್ದಿದ್ದಾರೆ.
ಬಾಂಬ್ ತಯಾರಿಸಿ ಅಟ್ಟಹಾಸ ಮೆರೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಇದರ ಹಿಂದೆ ಒಂದು ವ್ಯವಸ್ಥಿತವಾದ ಷಡ್ಯಂತ್ರ ಇದ್ದೇ ಇರುತ್ತದೆ. ದೊಡ್ಡ ಗುಂಪೊಂದು ಇದರ ಹಿಂದೆ ಕೆಲಸ ಮಾಡ್ತಿರುತ್ತದೆ. ದುಷ್ಕೃತ್ಯಕ್ಕೆ ಆರ್ಥಿಕ ಬಲವನ್ನ ತುಂಬಲಾಗಿರುತ್ತದೆ. ಬಾಂಬ್ ತಯಾರಿ, ಅದರ ಪ್ರಯೋಗ, ಎಲ್ಲಿ ಸ್ಫೋಟ ಮಾಡಬೇಕು ಎಂಬ ಬಗ್ಗೆ ವರ್ಷಗಳಿಗಿಂತ ಹೆಚ್ಚು ತಯಾರಿ ಬೇಕಾಗುತ್ತದೆ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾದಳ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮುಂದೆ ಆಗಬಹುದಾದ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ರಾತ್ರಿ ಹಗಲು ಕೆಲಸ ಮಾಡುತ್ತಿದೆ.
ಫಾದರ್ ಮುಲ್ಲರ್ಸ್ ಆಸ್ಪತ್ರೆ (Father Muller Hospital) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರೀಕ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಹೊಂಚು ಹಾಕಿ ಕುಳಿತಿದೆ. ಒಮ್ಮೆ ಡಿಸ್ಚಾರ್ಜ್ ಆದ್ರೆ ಹಲವಾರು ಆತಂಕಕಾರಿ ವಿಚಾರಗಳು ಉಗ್ರನ ಬಾಯಿಯಿಂದ ಹೊರ ಬೀಳಲಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ಅಲೋಕ್ಕುಮಾರ್