ಬೆಂಗಳೂರು: ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ತವರಿಗೆ ಬಂದ ಶರತ್ ಬಚ್ಚೇಗೌಡರಿಗೆ ಅಭಿಮಾನಿಗಳು ಅದ್ಧೂರಿ ರೀತಿಯಾಗಿ ಬರಮಾಡಿಕೊಂಡಿದ್ದಾರೆ.
ಅರ್ಹರು, ಅನರ್ಹರು ಹೋರಾಟದ 15 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಹೊಸಕೋಟೆಯಲ್ಲಿ ಮಾತ್ರ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿತ್ತು. ಸ್ವಾಭಿಮಾನಿ ಹೆಸರಿನಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ತಮ್ಮ ಕುಟುಂಬದ ಎದುರಾಳಿ ಅನರ್ಹ ಶಾಸಕ ಬಿಜೆಪಿಯ ಎಂ.ಟಿ.ಬಿ.ನಾಗರಾಜ್ ವಿರುದ್ಧ ಭರ್ಜರಿಯಾಗಿ ಜಯಗಳಿಸಿದ್ದರು.
ಹೊಸಕೋಟೆಯ ಅಯ್ಯಪ್ಪ ದೇವಾಲಯದ ಬಳಿಯಿಂದ ಆರಂಭವಾದ ಮೆರವಣಿಗೆ ಮುಖ್ಯರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಶರತ್ ಅಭಿಮಾನಿಗಳು ಬೃಹತ್ ಸೇಬಿನ ಹಾರ ಕ್ರೇನ್ ಮೂಲಕ ಹಾಕಿ ಹಾಗೂ ಬೆಳ್ಳಿ ಗದೆಯನ್ನು ನೀಡಿ ತಮ್ಮ ಯುವನಾಯಕನನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಭರ್ಜರಿ ಸ್ವಾಗತ ನೀಡಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಶರತ್ ಮೇಲೆ ಹೂವಿನ ಮಳೆ ಸುರಿಸಿ ತಮ್ಮ ಅಭಿಮಾನ ಪ್ರದರ್ಶಿಸಿದರು. ಶರತ್ ಬಚ್ಚೇಗೌಡರ ಮೆರವಣಿಗೆಯುದ್ದಕ್ಕೂ ನೆರೆದಿದ್ದ ಮತದಾರರಿಗೆ ಮತ ನೀಡಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.