ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹಲವಾರು ವರ್ಷಗಳ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ.
ಎರಡು ಮಿತ್ರಪಕ್ಷಗಳು ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ಸೇರಿದಂತೆ, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುದು ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಶಿವಸೇನೆ ನಾಯಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ
ಉದ್ಧವ್ ಠಾಕ್ರೆ ಅವರ ಸೋದರ ಸಂಬಂಧಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಈ ತಿಂಗಳ ಆರಂಭದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ಮೇ 3 ರೊಳಗೆ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಒಂದು ವೇಳೆ ಧ್ವನಿವರ್ಧಕಗಳನ್ನು ತೆರವುಗೊಳಿಸದೇ ಇದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾವನ್ನು ಜೋರಾಗಿ ಪಠಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಮತ್ತು ಪಕ್ಷೇತರ ಶಾಸಕ ರವಿ ರಾಣಾ ಅವರು ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ ಮೇಲೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ನಂತರ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ
ಪವಾರ್ ಮತ್ತು ಉದ್ಧವ್ ಠಾಕ್ರೆ ಅವರು ರಾಜ್ ಠಾಕ್ರೆ ಅವರ ಬೇಡಿಕೆ ಕುರಿತಂತೆ ಚರ್ಚಿಸಿದರು, ಏಕೆಂದರೆ ಇದರಿಂದ ಮುಂಬೈ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಡಬಹುದು. ಹೀಗಾಗಿ ಹಲವಾರು ನಾಯಕರನ್ನು ಮಾತನಾಡಲು ರಾಜ್ ಠಾಕ್ರೆ ಬಳಿಗೆ ಕಳುಹಿಸಲಾಗಿದ್ದರೂ, ರಾಜ್ ಠಾಕ್ರೆ ಯಾರ ಮಾತನ್ನೂ ಕೇಳಲು ಸಿದ್ಧವಾಗಿಲ್ಲ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.