ಚೆನ್ನೈ: ದೇಶದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದ ಜನಪ್ರಿಯ ಶಂಕರ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಿ.ಶಂಕರನ್ ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
45 ವರ್ಷದ ಡಿ. ಶಂಕರನ್ ಗುರುವಾರ ರಾತ್ರಿ ತಮ್ಮ ಮೈಲಾಪುರ್ ನಿವಾಸದಲ್ಲಿ ವೈಯಕ್ತಿಕ ಕಾರಣಗಳಿಗೆ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ ಶಂಕರನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಪತ್ನಿ ವೈಷ್ಣವಿಯೊಂದಿಗೆ ಜಗಳವಾಡಿದ್ದು, ಹಲವು ತಿಂಗಳಿನಿಂದ ಇವರಿಬ್ಬರ ನಡುವೆ ಮನಸ್ತಾಪವಿತ್ತು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಗುರುವಾರ ರಾತ್ರಿ ಹೆಂಡತಿಯೊಂದಿಗೆ ಜಗಳವಾಡಿಕೊಂಡ ಶಂಕರನ್, ಮಧ್ಯರಾತ್ರಿ ತಮ್ಮ ರೂಮಿನ ಬಾಗಿಲನ್ನ ಹಾಕಿಕೊಂಡಿದ್ದಾರೆ. ಮನೆಯವರು ಬಾಗಿಲನ್ನ ತೆಗೆಸಲು ಪ್ರಯತ್ನಿಸಿದ್ದಾರೆ. ಎಷ್ಟೇ ಬಡಿದರೂ ಬಾಗಿಲನ್ನ ತೆರೆಯದ ಕಾರಣ ಸಂಬಂಧಿಕರು ಒಡೆದು ನೋಡಿದಾಗ ಫ್ಯಾನ್ ಗೆ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶಂಕರ್ ದೇಹ ಪತ್ತೆಯಾಗಿದೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಾಗಲೇ ಶಂಕರ್ ಮೃತಪಟ್ಟಿದ್ದರು.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ರೋಯಪೆಟ್ಟಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv