ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ಫೇಸ್ಬುಕ್ನಲ್ಲಿ ತಂದೆಯ ಬಗ್ಗೆ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
“ನನ್ನ ತಂದೆ ನನ್ನನ್ನು ನೋಡಿ ಶಭಾಷ್ ಮಗನೆ ನ್ಯಾಯವಾಗಿ ಧರ್ಮವಾಗಿ ನನಗೆ ಇಷ್ಟವಾದ ರೀತಿಯಲ್ಲಿ ಬದುಕುತ್ತಿದ್ದೀಯಾ”, ಅಂದರೆನೋ ಅನ್ನಿಸಿತು. ಊಬರ್ ಸೇವೆಯಲ್ಲಿ ತೊಡಗಿದ್ದಾಗ ದಾರಿಯಲ್ಲಿ ಯಾರೋ ಮಹಾನುಭಾವರು ನನ್ನ ತಂದೆಯ ಫೋಟೋವನ್ನು ಗೋಡೆ ಮೇಲೆ ಲ್ಯಾಮಿನೇಟ್ ಮಾಡಿ ಹಾಕಿಸಿದ್ದಾರೆ. ಅಲ್ಲಿ ಒಂದು ಕ್ಷಣ ನಿಂತು ಹೃದಯಪೂರ್ವಕವಾಗಿ ನಮಿಸಿ ಮುಂದೆ ಹೊರಟೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಶಂಕರ್ ಅಶ್ವಥ್ ಅವರು ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. “ನಿಮ್ಮ ತಂದೆಯವರು ತುಂಬಾ ಒಳ್ಳೆಯ ವ್ಯಕ್ತಿ. ಅವರ ಮಗನಾಗಿ ನೀವು ಒಳ್ಳೆಯವರೆ. ಜೀವನದಲ್ಲಿ ಸ್ವಲ್ಪ ಎಡವಿರಬಹುದು ಆದರೆ ಎಂದಿಗೂ ಹೆದರಬೇಡಿ ಒಂದಿಲ್ಲೊಂದು ದಿನಾ ನಿಮಗೂ ಒಳ್ಳೆಯ ಕಾಲ ಬರುತ್ತದೆ. ನಿಮ್ಮನ್ನು ಮರೆತ ಚಿತ್ರರಂಗ ಒಂದಿನ ನಿಮ್ಮ ಕಾಲಿನ ಬಳಿ ಬರುತ್ತದೆ ನೀವು ಕರ್ನಾಟಕದ ಅತಿ ದೋಡ್ಡ ಚಿತ್ರ ನಿರ್ಮಾಪಕರಾಗಲಿ ಎಂದು ಹರಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
“ಶ್ರೀ ಅಶ್ವಥ್ ಸರ್ ಅವರು ಕರ್ನಾಟಕ ಕಂಡ ಮೇರು ನಟ ಅವರ ಸುಪುತ್ರರಾದ ತಾವುಗಳೂ ಸಹ ಪ್ರತಿಭಾವಂತರು ಎನ್ನುವುದರಲ್ಲಿ ಅನುಮಾನವಿಲ್ಲ” ಎಂದಿದ್ದಾರೆ. “ಬರೀಯ ಪೋಷಕನಟರಲ್ಲ ಅವರು ನಮ್ಮಲ್ಲೇ ಒಬ್ಬರಾಗಿದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. ಅವರ ಅಭಿನಯದಲ್ಲಿನ ತಲ್ಲೀನತೆ, ಪಾತ್ರಪೋಷಣೆ ಇದೆ. ಇಂದಿನ ನಟರು ಮತ್ತು ಮುಂದಿನ ನಟರಿಗೆ ಮಾದರಿ ಯಾಗಿರುತ್ತಾರೆ” ಎಂದು ಹೇಳಿದ್ದಾರೆ.
ಇದೇ ರೀತಿ ನೂರಾರು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಕೆಲ ಸಿನಿಮಾದಲ್ಲಿ ಅಭಿನಯಿಸಿದ್ದ ಶಂಕರ್ ಅಶ್ವಥ್ ಈಗ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೆಲವು ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿದೆ.