ದಾವಣಗೆರೆ: ನನಗೆ ಗೊತ್ತಿಲ್ಲದೆ ಹೆಸರು ಘೋಷಣೆಯಾಗಿದೆ. ಹೈಕಮಾಂಡ್ ನನಗೆ ಸರ್ಪ್ರೈಸ್ ಕೊಟ್ಟಿದೆ ಎಂದು ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ, 87 ವರ್ಷದ ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಂದೆಯೆಲ್ಲ ವಯಸ್ಸಾಗಿದೆ. ಟಿಕೆಟ್ ನೀಡಲ್ಲ ಎಂದು ಹೇಳುತ್ತಿದ್ದರು. ಈಗ ಅವರೇ ನಮಗೆ ಟಿಕೆಟ್ ನೀಡುತ್ತಿದ್ದಾರೆ. ನಾನು ಒಂದು ಬಾರಿ ಸಂಸದನಾಗಿದ್ದೆ, 5 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇಂದು ಬೆಂಗಳೂರಿಗೆ ಹೋಗಿ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲದೆ ಮಲ್ಲಿಕಾರ್ಜುನ್ಗೆ ಟಿಕೆಟ್ ಕೊಡುವಂತೆ ನಾನು ಕೇಳುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಒಂದು ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ ಅವರವರ ಇಷ್ಟ ಬಂದಂತೆ ಹೇಳಿದ್ದಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ ತೊಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಆದ್ರೆ ಈ ಬಾರಿ ಸ್ವತಃ ಶಾಮನೂರು ಅವರೇ ಕಣಕ್ಕೆ ಇಳಿದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಸೋತಿರುವ ಭಯದಿಂದ ಈ ಬಾರಿ ಲೋಕಸಮರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಬೀಗರ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಯಾಕೆಂದರೆ ಶಾಮನೂರು ಹಾಗೂ ಸಿದ್ದೇಶ್ವರ್ ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯ ಆಗುತ್ತಾರೆ. ಆದ್ರೆ ಅಳಿಯನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕ್ತಾರಾ ಮಾವ ಅನ್ನೋದನ್ನ ಕಾದು ನೋಡಬೇಕಾಗಿದೆ.