ದಾವಣಗೆರೆ: ಸೋತಾಗ ಸುಮ್ಮನೆ ರಾಜೀನಾಮೆ ಕೊಟ್ಟಿದ್ದಾರೆ. ಮತ್ತೆ ವಾಪಸ್ ತೆಗೆದುಕೊಳ್ಳುತ್ತಾರೆ. ಕರೆದು ಕೊಡಲಿ ಅಂತ ಈ ರೀತಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ವಿಚಾರಕ್ಕೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಶಿವಶಂಕರಪ್ಪ ಅವರು, ಈಗ ಚುನಾವಣೆಯಲ್ಲಿ ಸೋತಿದ್ದಾರೆ ಆದ್ದರಿಂದ ಸುಮ್ಮನೆ ರಾಜೀನಾಮೆ ಕೊಟ್ಟಿದ್ದಾರೆ. ಮತ್ತೆ ಅವರೇ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ಅಲ್ಲದೆ ಸೋನಿಯಾ ಗಾಂಧಿರವರೇ ರಾಜೀನಾಮೆ ತಿರಸ್ಕರಿಸಿ, ಸ್ಥಾನಮಾನವನ್ನು ಕರೆದು ಕೊಡಲಿ ಎಂದು ಈ ರೀತಿ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಕೇವಲ ನಾಟಕ ಎನ್ನುವ ಅರ್ಥದಲ್ಲಿ ಪರೋಕ್ಷವಾಗಿ ಕುಟುಕಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದು, ಸರ್ಕಾರ ಯಾವುದು ಇರೋತ್ತು ಅವರು ಅಧಿಕಾರಕ್ಕೆ ಬರುವುದು ಸ್ವಾಭಾವಿಕ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಆದ್ದರಿಂದ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಸಾಮಾನ್ಯ. ಅಲ್ಲದೆ ಸರ್ಕಾರಕ್ಕೆ ಅವರದೇ ಆದ ಸೋರ್ಸ್ ಇರುತ್ತೆ, ಅಧಿಕಾರಿಗಳು ಕಾನೂನು ಅವರದ್ದೆ ಆಗಿರುತ್ತೆ. ಹೀಗಾಗಿ ಗೆಲುವು ಸಾಧಿಸೋದು ಸುಲಭವಾಗುತ್ತದೆ ಎಂದು ಕಮಲದ ಗೆಲುವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.