ಚೆನ್ನೈ: ತಮಿಳುನಾಡಿನ ಅಪೂರ್ವ ನಿಧಿ ಕಲೈನಾರ್ ಮರೆಯಾಗಿದ್ದಾರೆ. ಕರುಣಾನಿಧಿ ತನ್ನ ಪತ್ನಿಯರಿಬ್ಬರು, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಂದೆಯ ಸಾವಿನಿಂದ ಮನನೊಂದು ಮಗ ಎಂ.ಕೆ ಸ್ಟಾಲಿನ್ ಭಾವನಾತ್ಮಕ ಕವನವನ್ನು ಬರೆದಿದ್ದಾರೆ.
ಈಗಲಾದ್ರೂ ನಿಮ್ಮನ್ನು ನಾನು ಅಪ್ಪ ಎಂದು ಕರೆಯಬಹುದೇ? ಎಂದು ಕರುಣಾನಿಧಿ ಬಗ್ಗೆ ಪುತ್ರ ಸ್ಟಾಲಿನ್ ಭಾವನಾತ್ಮಕ ಕವನವನ್ನು ಬರೆದಿದ್ದು, ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
`ನಾನು ಜೀವಮಾನವಿಡೀ ನಿಮ್ಮನ್ನು ನಾಯಕ(ತಲೈವರ್) ಎಂದೇ ಸಂಭೋಧಿಸಿದ್ದೇನೆ. ನನ್ನ ಜೀವನದಲ್ಲಿ ನಾನು ನಿಮ್ಮನ್ನು ತಂದೆ ಎನ್ನುವದಕ್ಕಿಂತ ನಾಯಕ ಎಂಬುದಾಗಿ ಕರೆದಿದ್ದೆ ಹೆಚ್ಚು. ಈಗಲಾದ್ರೂ ನಿಮ್ಮನ್ನು ಅಪ್ಪ ಎಂದು ಕರೆಯಬಹುದೇ ಎಂದು ಎಂ.ಕೆ ಸ್ಟಾಲಿನ್ ಕಂಬನಿ ಮಿಡಿಯುವ ಕವನ ನಮನ ಸಲ್ಲಿಸಿದ್ದಾರೆ.
ನೀವು ಎಲ್ಲಿಗಾದರೂ ಹೋಗುವಾಗ ನನ್ನನ್ನು ಹೇಳಿ ಹೋಗುತ್ತಿದ್ದಿರಿ. ಆದರೆ ಈ ಬಾರಿ ನೀವು ನನಗೆ ಹೇಳದೇ ಹೋಗಿದ್ದೀರಿ. ನಾಯಕರೇ ಮತ್ತೊಮ್ಮೆ ನಮಗೆ “ನನ್ನ ಪ್ರೀತಿಯ ಸಹೋದರರೇ” ಎಂದು ಕರೆಯಿರಿ. ಇದು ನಮಗೆ ಹಾಗೂ ನಮ್ಮ ಭಾಷೆಗೆ ಹೋರಾಡುವುದಕ್ಕೆ ಮುಂದಿನ ದಶಕದಲ್ಲೂ ನಮಗೆ ಶಕ್ತಿ ಸಿಗುತ್ತದೆ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ஒரே ஒருமுறை இப்போதாவது ‘அப்பா’ என அழைத்து கொள்ளட்டுமா ‘தலைவரே’! pic.twitter.com/HWyMPkSmLj
— M.K.Stalin (@mkstalin) August 7, 2018
ಆಸ್ಪತ್ರೆಯಲ್ಲಿಯೇ ನಿಧನ:
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು.
ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.
ಐದು ಬಾರಿ ಮುಖ್ಯಮಂತ್ರಿ:
ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.