– ಪಾಕ್ ಈಗ ಸುರಕ್ಷಿತ ದೇಶ
ಇಸ್ಲಾಮಾಬಾದ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡದಿದ್ದರೆ ಥ್ರಿಲ್ ಇರಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅಫ್ರಿದಿ, 2020ರ ಏಷ್ಯಾ ಕಪ್ನ ಆತಿಥ್ಯವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ. ಈ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಇರಬೇಕು. ಟೀಂ ಇಂಡಿಯಾ ಇಲ್ಲಿಗೆ ಬಂದು ಆಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ
ಟೂರ್ನಿ ಎಲ್ಲಿ ನಡೆದರೂ ಪರವಾಗಿಲ್ಲ. ಭಾರತ-ಪಾಕ್ ಆಡುವುದು ಮುಖ್ಯ. ಈ ನಿಟ್ಟಿನಲ್ಲಿ ಉಭಯ ದೇಶಗಳು ಪರಸ್ಪರ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಲಂಕಾ ಮತ್ತು ಬಾಂಗ್ಲಾದೇಶದ ತಂಡಗಳು ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು. ಬಾಂಗ್ಲಾದೇಶ ಕೂಡ ಇಲ್ಲಿ ಟೆಸ್ಟ್ ಆಡಲು ಒಪ್ಪಿದೆ. ಈ ಬಾರಿ ನಾವು ಪಿಎಸ್ಎಲ್ ಅನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದೇವೆ. ಪಾಕಿಸ್ತಾನ ಈಗ ಸುರಕ್ಷಿತ ದೇಶ ಅಂತ ಹೇಳಲು ಬಯಸುತ್ತೇನೆ. ಇಲ್ಲಿ ಆಟಗಾರರಿಗೆ ಯಾವುದೇ ಬೆದರಿಕೆ ಇಲ್ಲ. ಭಾರತ ತಂಡವು ಪಾಕಿಸ್ತಾನಕ್ಕೆ ಬಂದು ಸರಣಿಯನ್ನು ಆಡುವ ಸಮಯವನ್ನು ನಾನು ಎದುರು ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕಿವೀಸ್ ಟೆಸ್ಟ್ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಔಟ್
ಭಾರತ-ಪಾಕ್ ಆಡುವುದಿಲ್ಲ: ಬಿಸಿಸಿಐ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾಕಪ್ ಟಿ20 ಆತಿಥ್ಯ ವಹಿಸುವುದರಲ್ಲಿ ತಮಗೆ ಯಾವುದೇ ತೊಂದರೆ ಇಲ್ಲ. ಆದರೆ ಭಾರತೀಯ ಕ್ರಿಕೆಟ್ ತಂಡ ಆಡಲು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ಪಿಸಿಬಿ ಸಿಇಒ ವಾಸಿಮ್ ಖಾನ್, ಭಾರತ ತಂಡವು ಏಷ್ಯಾ ಕಪ್ ಆಡಲು ಬರದಿದ್ದರೆ ನಾವು ಟಿ 20 ವಿಶ್ವಕಪ್ ಆಡಲು ಹೋಗುವುದಿಲ್ಲ ಎಂದು ಹೇಳಿದ್ದರು.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಇದೇ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಹೊಸದಾಗಿ ಮಲೇಷ್ಯಾ ಸೇರಿಕೊಂಡಿದೆ. ಒಂದು ವೇಳೆ ಭಾರತ ಟೂರ್ನಿಯಿಂದ ಹೊರ ಉಳಿದರೆ ಕೇವಲ ಐದು ತಂಡಗಳು ಮಾತ್ರ ಆಡಬೇಕಾಗುತ್ತದೆ.