ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ನನ್ನು ಈಗಾಗಗಲೇ ಎನ್ಸಿಬಿ( NCB) ಬಂಧಿಸಿದೆ. ಇದೀಗ ಈ ಹಡಗಿನಲ್ಲಿ ಬೆಂಗಳೂರು ಮೂಲದವರು ಇದ್ದರು ಎನ್ನುವುದು ಬೆಳಕಿಗೆ ಬಂದಿದೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಡಿ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳ (ಎನ್ಸಿಬಿ) ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡು 8 ಮಂದಿಯನ್ನು ಬಂಧಿಸಿದೆ. ಆದರೆ ಇದರಲ್ಲಿ ಬೆಂಗಳೂರಿಗರು ಇದ್ದು, ಇವರನ್ನು ಮುಂಬೈ ಎನ್ಸಿಬಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಎನ್ಸಿಬಿ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದೆ. ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!
ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದರು.
ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್ಸಿಬಿ ರೋಚಕ ಕಾರ್ಯಾಚರಣೆ
ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎನ್ಸಿಬಿ ವಾದಕ್ಕೆ ಮಣೆ ಹಾಕಿದೆ. ಆರ್ಯನ್ನನ್ನು ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ರವರೆಗೂ ಎನ್ಸಿಬಿ ವಶಕ್ಕೆ ನೀಡಿದೆ. ಹೈಪ್ರೊಫೈಲ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ. ಅದಲ್ಲದೆ 4 ವರ್ಷದಿಂದ ಡ್ರಗ್ಸ್ ಸೇವನೆ ಮಾಡ್ತಿರುವ ಬಗ್ಗೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾರೆ. ಕೊಕೇನ್ ಸೇರಿದಂತೆ ಹಲವು ಮಾದಕ ವಸ್ತುಗಳ ಸೇವನೆ ಮಾಡಿದ್ದಾರೆ. ಆರ್ಯನ್ಗೆ ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟಿರುವ ಮೊಬೈಲ್ ಸಾಕ್ಷ್ಯ ಸಿಕ್ಕಿದೆ. ಮೊಬೈಲ್ ವಾಟ್ಸಪ್ನಲ್ಲಿ ಕೋಡ್ ವರ್ಡ್ ಬಳಸಿ ಡ್ರಗ್ ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆಗೂ ನಂಟಿರಬಹುದು. ವಾಣಿಜ್ಯ ಉದ್ದೇಶಕ್ಕಾಗಿಯೂ ಡ್ರಗ್ಸ್ ಖರೀದಿ ಮಾಡಿರುವ ಸಾಕ್ಷ್ಯ ಸಿಕ್ಕಿದೆ. ಎನ್ಡಿಪಿಎಸ್ ಕಾಯ್ದೆಯಡಿ ತಕ್ಷಣಕ್ಕೆ ಜಾಮೀನು ಕೊಡಲು ಬರಲ್ಲ (ರಿಯಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಉಲ್ಲೇಖ) ಖ್ಯಾತನಾಮರ ಡ್ರಗ್ಸ್ ಸೇವನೆಯಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಬಹುದು. ಆರ್ಯನ್ಗೆ ಜಾಮೀನು ನೀಡಬಾರದು, ಸಾಕ್ಷ್ಯ ನಾಶದ ಸಂಭವ ಇದೆ ಹಾಗಾಗಿ ಅಕ್ಟೋಬರ್ 11ರವರೆಗೂ ಆರೋಪಿಗಳನ್ನು ಎನ್ಸಿಬಿ ವಶಕ್ಕೆ ನೀಡಬೇಕು ಎಂದು ಪ್ರಬಲ ವಾದ ಮಂಡಿಸಿತು. ಇದನ್ನೂ ಓದಿ:ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ
ಶಾರೂಖ್ ಪುತ್ರನ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸತೀಶ್ ಮಾನ್ ಶಿಂಧೆ ಸುದೀರ್ಘವಾದ ಮಂಡಿಸಿದ್ರೂ ಪ್ರಯೋಜನ ಆಗಲಿಲ್ಲ. ಪುತ್ರನಿಗೆ ಬಂದೊದಗಿದ ಸ್ಥಿತಿ ಕಂಡು ಶಾರೂಖ್, ಗೌರಿ ಖಾನ್ ಕಣ್ಣೀರು ಇಟ್ಟಿದ್ದಾರೆ. ವಿಚಾರಣೆ ವೇಳೆ ಕಾನೂನು ಪ್ರಕಾರವೇ, ಶಾರೂಖ್ ಜೊತೆ ಫೋನ್ನಲ್ಲಿ ಮಾತನಾಡಲು ಆರ್ಯನ್ಗೆ ಎನ್ಸಿಬಿ ಎರಡು ನಿಮಿಷ ಅವಕಾಶ ನೀಡಿತ್ತು. ಈ ವೇಳೆ ಇಬ್ಬರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶಾರೂಖ್ ಪುತ್ರನ ಜೊತೆಗೆ ಇನ್ನಿಬ್ಬರನ್ನು ಕೂಡ ಎನ್ಸಿಬಿ ಕಸ್ಟಡಿಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ, ಆರ್ಯನ್ ಸೇರಿ ಇತರೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಈ ಮಧ್ಯೆ ವೀ ಸ್ಟ್ಯಾಂಡ್ ವಿತ್ ಶಾರೂಖ್ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಮುಂಬೈನ ಕಿಲಾ ಕೋರ್ಟ್ನಲ್ಲಿ ನಡೆದ ಎನ್ಸಿಬಿ ಮತ್ತು ಆರ್ಯನ್ ಪರ ವಕೀಲರ ವಾದ ಅಂತ್ಯಕ್ಕೆ ಕೋರ್ಟ್ ಆರ್ಯನ್ಗೆ ಜಾಮೀನು ನಿರಾಕರಿಸಿ, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ವರೆಗೂ ಎನ್ಸಿಬಿ ವಶಕ್ಕೆ ನೀಡಿದೆ. ಆದರೆ ಈ ಪ್ರಕರಣದಲ್ಲಿ ಬೆಂಗಳೂರು ಮೂಲದವರು ಇರುವುದು ಇದೀಗ ತಿಳಿದು ಬಂದಿದ್ದು, ಆತಂಕ ಎದುರಾಗಿದೆ.