ಮಲಯಾಳಂ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಹೇಮಾ ವರದಿ (Hema Committee), ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ (Sexual Assault) ಕುರಿತಂತೆ ಬಹಿರಂಗವಾಗಿ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ. ಈವರೆಗೂ ಪೊಲೀಸರು 17 ದೂರುಗಳನ್ನು ದಾಖಲಿಸಿಕೊಂಡಿದ್ದಾರಂತೆ.
ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರದ ನಡೆಯನ್ನು ಅಲ್ಲಿನ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಈವರೆಗೂ ಬಹಿರಂಗವಾಗದ ವರದಿಯನ್ನು ಈಗ ಆರ್.ಟಿ.ಐ ಅಡಿಯಲ್ಲಿ ಕೊಟ್ಟಿದ್ದು ಯಾಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಪ್ರತಿಭಟನೆಗಳು ಕೂಡ ನಡೆದಿವೆ. ಈ ನಡುವೆ ನಟಿಯರು ದೂರುಗಳನ್ನು ದಾಖಲಿಸುತ್ತಿದ್ದಾರೆ.
ಮಲಯಾಳಂ ಸಿನಿಮಾ ರಂಗದಲ್ಲಿ ಸಹ ಕಲಾವಿದೆಯಾಗಿ ಗುರುತಿಸಿಕೊಂಡಿರೋ ನಟಿ ಸೋನಿಯಾ ಮಲಹಾರ್ ಸೇರಿದಂತೆ ಅನೇಕ ನಟಿಯರು ಮುಂದೆ ಬಂದು, ದೂರುಗಳನ್ನು ದಾಖಲಿಸುತ್ತಿದ್ದಾರೆ. ಇನ್ನೂ ಹಲವರು ದೂರು ನೀಡಲು ಚಿಂತನೆ ಕೂಡ ನಡೆಸಿದ್ದಾರಂತೆ. ಹಾಗಾಗಿ ನಟಿಯರು ಒತ್ತಡದಲ್ಲಿದ್ದಾರೆ ಅನ್ನುವ ಮಾಹಿತಿಯೂ ಇದೆ.
ಧ್ವನಿ ಎತ್ತಿದ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್
ಜಸ್ಟಿಸ್ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಕೂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮಾತಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್ (Prithviraj Sukumaran) , ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರ್ಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.
ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.
ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿವೆ.