ಚೆನ್ನೈ: ದಾರಿಯಲ್ಲಿ ಬಿಡಿಗಾಸು ಬಿದ್ದಿದ್ದರೆ, ಯಾರಿಗೂ ಗೊತ್ತಾಗದಂತೆ ಅದನ್ನು ತಮ್ಮ ಜೇಬಿಗೆ ಇಳಿಸುವ ಅನೇಕರ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ 2ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯ ಸಮೀಪದಲ್ಲಿ ಸಿಕ್ಕ 50 ಸಾವಿರ ರೂ. ಹಣವನ್ನು ಪೊಲೀಸರಿಗೆ ಮುಟ್ಟಿಸಿ ಪ್ರಮಾಣಿಕತೆ ಮೆರೆದಿದ್ದಾನೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಚಿನ್ನಸೆಮುರ್ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಗ್ರಾಮದ ಪಂಚಾಯತ್ ಯುನಿಯನ್ ಮಿಡಲ್ ಸ್ಕೂಲ್ನ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿದ ಏಳು ವರ್ಷದ ಬಾಲಕ.
ನಡೆದದ್ದು ಏನು?
ಮೂತ್ರ ವಿಸರ್ಜನೆಗಾಗಿ ಶಾಲೆಯಿಂದ ಮೊಹಮ್ಮದ್ ಹೊರ ಬಂದಿದ್ದನು. ಈ ವೇಳೆ ಶಾಲೆಯ ಬಳಿಯ ರಸ್ತೆ ಪಕ್ಕದಲ್ಲಿ ಯಾರೋ ಚೀಲವನ್ನು ಏಸೆದು ಹೋಗಿದ್ದರು. ಅದರಲ್ಲಿ ಏನು ಇದೆ ಎಂದು ಮೊಹಮ್ಮದ್ ಚೀಲ ತೆರೆದು ನೋಡಿದ್ದಾನೆ. ಹಣ ಇರುವುದು ಗೊತ್ತಾಗಿದೆ. ತಕ್ಷಣವೇ ಅದನ್ನು ತರಗತಿಯ ಶಿಕ್ಷಕಿ ವಿ.ಜಯಂತಿ ಬಾಯಿ ಅವರಿಗೆ ತಂದು ಕೊಟ್ಟಿದ್ದನು. ಜಯಂತಿ ಅವರು ಘಟನೆಯನ್ನು ಮುಖ್ಯಶಿಕ್ಷಕಿಗೆ ವಿವರಿಸಿ, ನಂತರ ಹಣವನ್ನು ಜಿಲ್ಲಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಬಾಲಕನ ಪ್ರಾಮಾಣಿಕತೆ ಮೆಚ್ಚಿದ ಈರೋಡ್ ಠಾಣೆಯ ಎಸ್ಪಿ ಶಕ್ತಿ ಗಣೇಶನ್ ಅವರು ಮೊಹಮ್ಮದ್ಗೆ 1 ಸಾವಿರ ರೂ. ಪುರಸ್ಕಾರ ನೀಡಲು ಮುಂದಾದರು. ಆದರೆ ಮೊಹಮದ್ ಅದನ್ನು ಪಡೆಯಲಿಲ್ಲ. ನಂತರ 2,500 ರೂ. ನೀಡಲು ಮುಂದಾದರೂ ಮೊಹ್ಮದ್ ಪಡೆಯದೇ ಇದ್ದಾಗ ಆತನಿಗೆ ಮತ್ತು ಆತನ ತಮ್ಮನಿಗೆ ಬ್ಯಾಗ್ ಕೊಡಿಸುವುದಾಗಿ ಶಕ್ತಿ ಗಣೇಶ್ ಭರವಸೆ ನೀಡಿದರು. ಅಲ್ಲದೆ ಜುಲೈ 19ರಂದು ಮೊಹಮ್ಮದ್ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದಾರೆ.
ಮೊಹಮ್ಮದ್ ತಾಯಿ ಅಬ್ರುತ್ ಬೇಗಂ ಮತ್ತು ತಂದೆ ಬಾಷಾ ಮಗನ ಪ್ರಮಾಣಿಕತೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಾಷಾ ಅವರು ಬಟ್ಟೆ ವ್ಯಾಪಾರಿಯಾಗಿದ್ದು, ಒಂದು ದಿನಕ್ಕೆ 300 ರೂ. ರಿಂದ 500 ರೂ. ಸಂಪಾದನೆ ಮಾಡುತ್ತಾರೆ. ಮೊಹ್ಮದ್ ತಾಯಿ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಕೇವಲ 1 ಸಾವಿರ ರೂ. ಪಡೆಯುತ್ತಿದ್ದಾರೆ. ಇಂತಹ ಬಡತನದಲ್ಲಿ ಬೆಳೆದಿರುವ ಮೊಹ್ಮದ್ ಇಂದು ಅನೇಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.