ನವದೆಹಲಿ: ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಸಂಸತ್ನಲ್ಲಿ ಅಂಗೀಕರಿಸಿದ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಪ್ರಶ್ನಿಸುವಂತಿಲ್ಲ ಎಂದು ಹೇಳಿದೆ.
ಇಂದಿನ ವಿಚಾರಣೆ ವೇಳೆ ಸಂಸತ್ ನಲ್ಲಿ ಅಂಗೀಕರಿಸಿರುವ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಪ್ರಶ್ನಿಸಿಸಲು ಹೇಗೆ ಸಾಧ್ಯ ಎಂದು ನ್ಯಾಯ ಪೀಠವು ಪ್ರಶ್ನಿಸಿತು. ಸುಪ್ರೀಂ ಈ ಪ್ರಶ್ನೆ ಎತ್ತಿದ ಕಾರಣ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರದ ನೀತಿಗಳನ್ನು ವಿರೋಧಿಸುದಕ್ಕೆ ಭಾರೀ ಹಿನ್ನಡೆಯಾಗಿದೆ.
ಒಬ್ಬ ವ್ಯಕ್ತಿಯಾಗಿ ಮಮತಾ ಬ್ಯಾನರ್ಜಿ ಅವರು ಈ ಕ್ರಮವನ್ನು ಪ್ರಶ್ನಿಸಿ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಬಹುದು. ಆದರೆ ರಾಜ್ಯ ಸರ್ಕಾರ ಕೇಂದ್ರದ ಕಾಯ್ದೆಯನ್ನು ಪ್ರಶ್ನಿಸುವಂತಿಲ್ಲ. ಆಧಾರ್ ಕುರಿತು ಈಗಾಗಲೇ ಸಲ್ಲಿಕೆಯಾಗಿರುವ 21 ಅರ್ಜಿಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆಯನ್ನು ನಡೆಸಲು ಅವಕಾಶವಿದೆ ಎಂದು ತಿಳಿಸಿತು.
ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲು ಸರ್ಕಾರ ಕಡ್ಡಾಯಗೊಳಿಸಿರುವ ಕುರಿತು ಪ್ರಶ್ನಿಸಿದ ಕೋರ್ಟ್, ಈ ಕುರಿತು ನಾಲ್ಕು ತಿಂಗಳಿನಲ್ಲಿ ವರದಿಯನ್ನು ನೀಡುವಂತೆ ಸೂಚಿಸಿದೆ.
ಕೇಂದ್ರ ಹಲವು ಯೋಜನೆಗಳನ್ನು ಪಡೆಯಲು, ಆರ್ಥಿಕ ವ್ಯವಹಾರಗಳಿಗೆ ಹಾಗೂ ಮೊಬೈಲ್ ನಂಬರ್ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕಡ್ಡಾಯಗೊಳಿಸಿತ್ತು. ಸರ್ಕಾರದ ನಿರ್ದೇಶನಗಳಂತೆ ಈಗಾಗಲೇ ನೂರು ಕೋಟಿಗೂ ಹೆಚ್ಚು ಜನರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ಯೋಜನೆಗಳಿಗೆ ಲಿಂಕ್ ಮಾಡಿದ್ದಾರೆ. ಇನ್ನೂ ಹಲವರು ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲ. ಈ ಕುರಿತು ಗಮನಿಸಿದ ಸರ್ಕಾರ ಅಂತಹ ವ್ಯಕ್ತಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನೀಡಿದ್ದ ಅವಧಿಯನ್ನು ವಿಸ್ತರಿಸಿತ್ತು.
ಸರ್ಕಾರದ ನಿರ್ಧಾರದಿಂದ ಬಡವರು ಆಧಾರ್ ಸಂಖ್ಯೆಯನ್ನು ಹೊಂದಿಲ್ಲದ ಜನರು ಯೋಜನೆಯ ಸೌಲಭ್ಯವನ್ನು ಪಡೆಯಲಾಗದೆ ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ಹಲವು ಹೋರಾಟಗಾರರು ಸರ್ಕಾರದ ನಿಯಮವನ್ನು ಪ್ರಶ್ನಿಸಿ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವುದರಿಂದ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳ ಗುರುತಿಸಲು ಸುಲಭ ಸಾಧ್ಯವಾಗುತ್ತದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದ್ರೂ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ